ಮಳವಳ್ಳಿ: ಪಟ್ಟಣದ ರಾವಣಿ ರಸ್ತೆ ಬಳಿ ಮಾರಕಾಸ್ತ್ರಗಳೊಂದಿಗೆ ಭಾನುವಾರ ಸಂಜೆ ದರೋಡೆಗಾಗಿ ಹೊಂಚು ಹಾಕುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಂಡವನ್ನು ಬಂಧಿಸುವಲ್ಲಿ ಪಟ್ಟಣದ ಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ತಂಡದಲ್ಲಿದ್ದ ಐವರು ಆರೋಪಿಗಳಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ನಂದಗುಡಿ ಗ್ರಾಮದ ಇರ್ಫಾನ್ (28), ಸೈಯದ್ ಶಬ್ಬೀರ್ (26), ಫೈರೋಜ್ (27), ಶಾಮೀರ್ ಅಹಮದ್ (27) ಬಂಧಿತ ಆರೋಪಿಗಳು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಪುರ ಠಾಣೆಯ ಪಿಐ ಎ.ಕೆ. ರಾಜೇಶ್ ಹಾಗೂ ಸಿಬ್ಬಂದಿ ಮಾದೇಶ, ಶಿವಕುಮಾರ್ ಗಸ್ತು ಮಾಡುವ ವೇಳೆ ರಾವಣಿ ರಸ್ತೆಯ ಕ್ರಾಸ್ ಬಳಿ ಕಾರು ನಿಲ್ಲಿಸಿಕೊಂಡು ನಿಂತಿದ್ದ ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಆರೋಪಗಳನ್ನು ಬೆನ್ನಟ್ಟಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಕಾರಿನಲ್ಲಿದ್ದ ಒಂದು ಲಾಂಗ್, ಚಾಕು, ಖಾರದಪುಡಿ, 4 ಮಂಕಿ ಕ್ಯಾಪ್ ವಶಪಡಿಸಿಕೊಂಡಿದ್ದು, ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.