ನಾಗಮಂಗಲ: ‘ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡಿದಾಗ ಮಾತ್ರ ನಾವು ಗಳಿಸಿದ ಪದವಿಗಳು ಸಾರ್ಥಕವಾಗುತ್ತವೆ. ಅಂಥ ಸೇವೆಯನ್ನು ಸಮಾಜ ಗೌರವಿಸುತ್ತದೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ವೈದ್ಯಕೀಯ ಸ್ನಾತಕೋತ್ತರ, ಎಂಬಿಎ, ಎಂ.ಟೆಕ್, ನರ್ಸಿಂಗ್, ಫಾರ್ಮಸಿ, ಬಿ.ಕಾಂ, ಬಿ.ಎಡ್ ಪದವೀ ಧರರ ದ್ವಿತೀಯ ಘಟಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಪಡೆದು ಸಮಾಜಕ್ಕೆ ಪ್ರವೇಶ ಪಡೆದ ನಂತರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಜತೆಗೆ, ಕಾಲ ಮತ್ತು ತಂತ್ರಜ್ಞಾನದೊಂದಿಗೆ ಜ್ಞಾನ ಉನ್ನತೀ ಕರಿಸಿಕೊಳ್ಳಬೇಕು ಎಂದರು.
‘ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್’ ಸಂಸ್ಥೆಯ ಪ್ರೊ.ಎಂ.ಆರ್.ಎಸ್.ರಾವ್ ಮಾತನಾಡಿ, ಆದಿಚುಂಚನಗಿರಿ ವಿವಿಯು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ಮುಂದಿನ ಪೀಳಿಗೆಯ ಅಗತ್ಯ ಪೂರೈಸಲು ವಿಜ್ಞಾನದ ಅಭಿವೃದ್ಧಿ ಅಗತ್ಯವಾಗಿದೆ ಎಂದರು.
ವಿದ್ಯಾರ್ಥಿಗಳಾದ ಕೆ.ಎಲ್.ಪೂಜಾ, ಎಚ್.ಪುಷ್ಪಾ, ಡಾ.ಕೆ.ಮೋನಿಕಾ ಭಾಸ್ಕರ್, ಡಾ.ನದಿಯಾ ಅಹಮದ್, ಸಂಜಯ್ ಕೆ.ಗೌಡ, ಕೆ.ವರಲಕ್ಷ್ಮೀ, ರಂಜಿತಾ, ಡಿ.ವಿ.ಸೋನಾ ಅವರಿಗೆ ಚಿನ್ನದ ಪದಕ ನೀಡಲಾಯಿತು. 289 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾ ಯಿತು. ಡಾ.ಎಂ.ಎ.ಶೇಖರ್ ವಿಶ್ವಾವಿದ್ಯಾಲಯದ ವಾರ್ಷಿಕ ವರದಿ ವಾಚಿಸಿದರು.
ಪುರುಷೋತ್ತಮಾನಂದನಾಥ ಸ್ವಾಮೀಜಿ, ಕುಲಸಚಿವ ಡಾ.ಸುಬ್ಬ ರಾಯ, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ ಶಿವರಾಮು, ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಮೇಶ್, ಎಂಬಿಎ ಕಾಲೇಜಿನ ಪ್ರಾಂಶುಪಾಲ ಡಾ.ನರೇಂದ್ರ, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಟಿ ಶಿವರಾಮು, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ರಾಮು, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.