ಆಲೂರು: ಹಾಸನ ಜಿಲ್ಲೆಯಲ್ಲಿ ವಾರಕ್ಕೆ ಐದು ದಿನ ಲಾಕ್ಡೌನ್ ಮಾಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದರು.
ಆಲೂರು ಪಟ್ಟಣದಲ್ಲಿ ಕೊರೊನಾ ಜಾಗೃತಿ ಸಭೆ ಬಳಿಕ ಮತನಾಡಿದ ಅವರು, ಇತ್ತೀಚೆಗೆ ಜಿಲ್ಲಾ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಮೂರು ದಿನ ಲಾಕ್ಡೌನ್ ಮಾಡಲು ಒಪ್ಪಿದ ಜಿಲ್ಲಾ ಉಸ್ತುವಾರಿ ಸಚಿವರು, ಕೆಲ ಗಂಟೆ ನಂತರ ವಾಪಾಸು ಪಡೆದ ಕಾರಣ ಗೊತ್ತಾಗಲಿಲ್ಲ. ಕೊರೊನಾ ಪ್ರಕರಣದಲ್ಲಿ ಹಾಸನ ಜಿಲ್ಲೆ, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸೋಂಕಿತರನ್ನು ಹೋಂಐಸೋಲೇಶನ್ ಮಾಡಿರುವುದು ಮಾರಕವಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಮೊರಾರ್ಜಿ ಶಾಲೆ, ಹಾಸ್ಟೆಲ್ಗಳನ್ನು ಬಳಸಿಕೊಂಡು ಕೋವಿಡ್ ಕೇರ್ ಕೇಂದ್ರ ಮಾಡ ಬೇಕಿತ್ತು. ಕೊರೊನಾ ಹರಡುವಿಕೆ ತಡೆಯು ವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 15 ಜನ ಮರಣಕ್ಕೀಡಾಗುತ್ತಿದ್ದಾರೆ. ಲಾಕ್ಡೌನ್ ಹೇರದಿದ್ದರೆ ಸೋಂಕಿ ತರು ಮತ್ತು ಮರಣ ಪ್ರಮಾಣ ಹೆಚ್ಚಳವಾ ಗಲಿದೆ. ಲಾಕ್ಡೌನ್ ಸಂದರ್ಭದಲ್ಲಿ ಬಡವರಿಗೆ ತಿಂಗಳಿಗೆ ₹ 4 ಸಾವಿರ, ಬೀದಿಬದಿ ವ್ಯಾಪಾರಿಗಳಿಗೆ ₹ 7000, ಹತ್ತು ಕೆ.ಜಿ.ಅಕ್ಕಿ ನೀಡಬೇಕು ಎಂದರು.
ಕೋವಿಡ್ ವಿಷಯದಲ್ಲೂ ರಾಜ್ಯ ಸರ್ಕಾರ ರಾಜಕೀಯ ಮಾಡಿದೆ. ರಾಜ್ಯಕ್ಕೊಂದು ಕಾನೂನಾದರೆ ಹಾಸನ ಜಿಲ್ಲೆಗೊಂದು ಕಾನೂನು ಮಾಡಿರುವುದು ಸರಿಯಲ್ಲ. ಪಕ್ಕದ ಕೊಡಗು, ಮೈಸೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸದರನ್ನು ಟಾಸ್ಕ್ಫೋರ್ಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ, ಹಾಸನ ಜಿಲ್ಲೆಯಲ್ಲಿ ಕೈಬಿಡಲಾಗಿದೆ. ಆದರೂ ನನ್ನ ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದರು.
ಮೂರನೆ ಅಲೆ ಸದ್ಯದಲ್ಲೆ ಪ್ರಾರಂಭವಾಗಲಿದೆ ಎಂದು ತಜ್ಞರ ಅಭಿಪ್ರಾಯವನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.