ಮಳವಳ್ಳಿ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಅಡ್ಡ ಮತದಾನಕ್ಕೆ ಕಾಂಗ್ರೆಸ್ ಮುಖಂಡ ಪಿ.ಎಂ.ನರೇಂದ್ರಸ್ವಾಮಿ ಅವರು ಸೂಚಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಾ ಸುಂದ್ರಪ್ಪ ನಡುರಸ್ತೆಯಲ್ಲಿ ಕುಳಿತು ಕಣ್ಣೀರಿಟ್ಟರು.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸುಜಾತಾ ಅವರ ಪತಿ ಸುಂದ್ರಪ್ಪ ಅವರು ಎ ತರಗತಿಯಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಮಂಗಳವಾರ ರಾತ್ರಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರ ಬದಲಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಎ ತರಗತಿಯ ಮತದಾರರಿಗೆ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ನರೇಂದ್ರಸ್ವಾಮಿ ನಡೆ ಖಂಡಿಸಿ ರಸ್ತೆ ಮಧ್ಯೆ ಕುಳಿತು ಸುಜಾತಾ ಆಕ್ರೋಶ ವ್ಯಕ್ತಪಡಿಸಿದರು.
ಆರೋಪ ಗಂಭೀರ ಸ್ವರೂಪ ಪಡೆದುಕೊಳ್ಳುವ ಮಾಹಿತಿ ಅರಿತ ಮತ್ತೊಬ್ಬ ಜಿ.ಪಂ.ಸದಸ್ಯೆ ಸುಷ್ಮಾರಾಜು ಹಾಗೂ ಮಾಜಿ ತಾ.ಪಂ.ಅಧ್ಯಕ್ಷ ಸುಂದರೇಶ್, ಸುಜಾತಾ ಅವರನ್ನು ಮನವೊಲಿಸಲು ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ.ಸುಂದ್ರಪ್ಪ ಮಾತನಾಡಿ ‘ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವಕಾಶವಾದಿ ರಾಜಕರಣ ಮಾಡುತ್ತಿದ್ದು, ಅವರಾಗಿಯೇ ನನ್ನ ಕರೆದು ಚುನಾವಣೆಗೆ ನಿಲ್ಲುವಂತೆ ಸೂಚನೆ ನೀಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ತಮ್ಮನ್ನು ಕೈಬಿಟ್ಟು ಬೇರೆಯವರಿಗೆ ಮತದಾನ ಮಾಡಲು ಸೂಚನೆ ನೀಡಿದ್ದಾರೆ. ನಾವು ಸ್ವಾಭಿಮಾನ ರಾಜಕರಣ ಮಾಡುತ್ತೇವೆಯೇ ಹೊರತು ಸ್ವಾರ್ಥ ರಾಜಕರಣ ಮಾಡುವುದಿಲ್ಲ’ ಎಂದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.