ಮಂಡ್ಯ: ಸ್ವಾತಂತ್ಯ ಚಳುವಳಿಗೆ ಸ್ಫೂರ್ತಿಯಾಗಿದ್ದ ಮದ್ದೂರಿನ ಶಿವಪುರ ಧ್ವಜ ಸತ್ಯಗ್ರಹ ಸೌಧಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘ಭೂತಬಂಗಲೆಯಾದ ಧ್ವಜ ಸತ್ಯಾಗ್ರಹ ಸೌಧ’ ವಿಶೇಷ ವರದಿಗೆ ಸ್ಪಂದಿಸಿದ ಅವರು ಸ್ಥಳಕ್ಕೆ ತೆರಳಿ ಸ್ಮಾರಕ ವೀಕ್ಷಣೆ ಮಾಡಿದರು.
‘ಸ್ಮಾರಕಸೌಧ ಅಭಿವೃದ್ಧಿಗೆ ಪುರಸಭೆ ಯೋಜನೆ ರೂಪಿಸಬೇಕು. ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಸೌಧವನ್ನು ಪರಸಭೆಗೆ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಟ್ಟಡವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಪ್ರಮುಖ ಆದ್ಯತೆ ನೀಡಬೇಕು. ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಉದ್ಯಾನ, ಕಾರಂಜಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಸ್ವಾತಂತ್ರ್ಯ ಹೋರಾಟದಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಇತಿಹಾಸದ ಪುಟಗಳಲ್ಲಿ ಸೇರಿದೆ. ಇಂತಹ ಸ್ಮಾರಕವನ್ನು ಸುಸ್ಥಿತಿಯಲ್ಲಿ ಇಡಬೇಕು. ಸ್ಮಾರಕದ ಮುಖ್ಯ ಕಟ್ಟಡ, ಅನೆಕ್ಸ್ ಕಟ್ಟಡವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಾರಣ ಇದಕ್ಕೆ ವಿಶೇಷ ರೂಪ ನೀಡಬೇಕು’ ಎಂದರು.
ಸ್ಧಳದಲ್ಲಿ ಮದ್ದೂರಿನ ತಹಶೀಲ್ದಾರ್ ವಿಜಯ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.