ಶ್ರೀರಂಗಪಟ್ಟಣ: ಅಭಿವೃದ್ಧಿಯ ಕಾರಣ ನೀಡಿ ಭೂಮಿಯನ್ನು ಮನಸೋ ಇಚ್ಛೆ ಕೊರೆಯುವುದು ಸರಿಯಲ್ಲ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಡಿ. ರೂಪಾ ಹೇಳಿದರು.
ಪಟ್ಟಣದ ಕೃಷಿಕ ಸಮಾಜ ಭವನದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ಏರ್ಪಡಿಸಿದ್ದ ವಿಶ್ವ ಭೂಮಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಗಣಿಗಾರಿಕೆ. ಕೊಳವೆ ಬಾವಿ ಇತರ ಉದ್ದೇಶಗಳಿಗೆ ಭೂಮಿಯನ್ನು ಅಡೆತಡೆಯಿಲ್ಲದೆ ಕೊರೆಯಲಾಗುತ್ತಿದೆ. ಇದರಿಂದ ಭೂಮಿಯ ಪದರಗಳಲ್ಲಿ ವ್ಯತ್ಯಾಸಗಳು ಉಂಟಾಗುತ್ತಿವೆ. ಭೂಮಿ ಕೊರೆಯುವ ಪ್ರಕ್ರಿಯೆ ಹೀಗೇ ಮುಂದುವರೆದರೆ ಭವಿಷ್ಯದಲ್ಲಿ ತೊಂದರೆ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಕೆಂಚೇಗೌಡ ಭೂಮಿಯ ಮಹತ್ವ ಕುರಿತು ಉಪನ್ಯಾಸ ನೀಡಿದರು. ನ್ಯಾಯಾಧೀಶ ಬಿ.ಆರ್. ಹನುಮಂತರಾಯಪ್ಪ, ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಮಾತನಾಡಿದರು. ಕೃಷಿಕ ಸಮಾಜದ ಅಧ್ಯಕ್ಷ ಕಡತನಾಳು ಬಾಲಕೃಷ್ಣ, ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.