ADVERTISEMENT

ಪ್ರಾಣ ಕೊಟ್ಟಾದರೂ ಕೆಆರ್‌ಎಸ್‌ ಡ್ಯಾಂ ಉಳಿಸಿಕೊಳ್ಳುತ್ತೇವೆ: ಸುನಂದಾ ಜಯರಾಂ

ಕೆಆರ್‌ಎಸ್‌ ಜಲಾಶಯದ ಬಳಿ ರೈತ ಸಂಘದಿಂದ ಪ್ರತಿಭಟನಾ ಸಭೆ: ಸರ್ಕಾರದ ವಿರುದ್ಧ ಮೊಳಗಿದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 13:46 IST
Last Updated 11 ಜೂನ್ 2025, 13:46 IST
<div class="paragraphs"><p>ಕೆಆರ್‌ಎಸ್‌ ಡ್ಯಾಂ ಬಳಿ ಬುಧವಾರ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌ ಅವರನ್ನು ರೈತ ಮುಖಂಡರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು   –ಪ್ರಜಾವಾಣಿ ಚಿತ್ರ</p></div>

ಕೆಆರ್‌ಎಸ್‌ ಡ್ಯಾಂ ಬಳಿ ಬುಧವಾರ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌ ಅವರನ್ನು ರೈತ ಮುಖಂಡರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು –ಪ್ರಜಾವಾಣಿ ಚಿತ್ರ

   

ಮಂಡ್ಯ: ‘ಕಾವೇರಿ ನೀರಿಗಾಗಿ ‘ರಕ್ತ ಕೊಟ್ಟೇವು, ನೀರು ಕೊಡೆವು’ ಎಂದು ಉಪವಾಸ ಸತ್ಯಾಗ್ರಹ ನಡೆಸಿದವರು ನಾವು. ಈಗ ಕೆಆರ್‌ಎಸ್‌ ಅಣೆಕಟ್ಟೆಗೆ ಅಪಾಯವಾಗುತ್ತದೆ ಎಂದರೆ ಸುಮ್ಮನಿರುತ್ತೇವೆಯೇ? ರೈತರ ಜೀವನಾಡಿ ‘ಕನ್ನಂಬಾಡಿ ಕಟ್ಟೆ’ ಉಳಿವಿಗಾಗಿ ಪ್ರಾಣ ಬೇಕಾದರೂ ಕೊಡುತ್ತೇವೆ’ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಆಕ್ರೋಶದಿಂದ ನುಡಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯ ಸಮೀಪ ಬುಧವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ರೈತ, ದಲಿತ, ಮಹಿಳಾ, ಕನ್ನಡ ಹಾಗೂ ಪ್ರಗತಿಪರ ಸಂಘಟನೆಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳ ನೇತೃತ್ವದಲ್ಲಿ ‘ಕಾವೇರಿ ಆರತಿ’ ಮತ್ತು ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಗಳನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

ಜೂನ್‌ 6ರಂದು ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಸಿಎಂ ಮತ್ತು ಡಿಸಿಎಂ ಜೊತೆ ಮಾತನಾಡಿ ನಿರ್ಣಯ ತಿಳಿಸುತ್ತೇವೆ ಎಂದು ಮಾತು ಕೊಟ್ಟಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ನಾವು ಸುಮ್ಮನಿದ್ದೆವು. ಆದರೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕದ್ದುಮುಚ್ಚಿ ರಾತ್ರೋರಾತ್ರಿ ಡ್ಯಾಂ ಬಳಿ ‘ಕಾವೇರಿ ಆರತಿ’ಯ ಕಾಮಗಾರಿ ನಡೆಸುತ್ತಿರುವುದು ಏಕೆ? ಎಂದು ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಅನ್ಯಾಯ ಆಗಿದೆ, ಅದಕ್ಕೆ ಸಾಕ್ಷಿ ಎದುರಿಗಿದೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಕ್ಷೆ ಆಗಲೇಬೇಕು. ಡ್ಯಾಂ ಬಳಿ ಮರಗಳನ್ನು ಕಡಿದದ್ದು ಏಕೆ, ಕಾವೇರಿ ನದಿಗೆ ನೂರಾರು ಲೋಡ್‌ ಮಣ್ಣು ಸುರಿದದ್ದು ಏಕೆ? ಈ ಬಗ್ಗೆ ಸ್ಪಷ್ಟನೆ ಕೊಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಶ್ರೀರಂಗಪಟ್ಟಣ ಮತ್ತು ಮೇಲುಕೋಟೆ ಕ್ಷೇತ್ರದ ಶಾಸಕರು ಸ್ಥಳಕ್ಕೆ ಬರಬೇಕು ಎಂದು ರೈತರೊಂದಿಗೆ ಪಟ್ಟು ಹಿಡಿದರು.

ಜೈಲಿನಲ್ಲಿರಬೇಕಾದವರು ವಿಧಾನಸೌಧದೊಳಗೆ!

ಜೈಲಿನಲ್ಲಿರಬೇಕಾದವರು ಇಂದು ವಿಧಾನಸೌಧದೊಳಗೆ ಆಳ್ವಿಕೆ ನಡೆಸುತ್ತಿದ್ದಾರೆ. ಗೋಪಾಲಗೌಡರಂಥವರನ್ನು ತರಲು ಆಗುತ್ತದೆಯೇ? ವಿಧಾನಸೌಧ ಸುಳ್ಳಿನ ಸೌಧವಾಗಿದೆ. ಅಪರಾಧ ಮಾಡಿದವರಿಗೆ ಶಿಕ್ಷೆ ಕೊಡಲು ಜನ ತಯಾರಾಗಿದ್ದಾರೆ ಎಂದರು.

ಕಾವೇರಿ ನೀರಾವರಿ ನಿಗಮದ ಇಇ ಜಯಂತ್‌ ಮಾತನಾಡಿ, ‘ಕಾವೇರಿ ಆರತಿಗಾಗಿ ಡ್ಯಾಂ ಸಮೀಪದ ಬೋಟಿಂಗ್‌ ಪಾಯಿಂಟ್‌ನಲ್ಲಿ ಪೂರ್ವಭಾವಿ ಕಾಮಗಾರಿ ನಡೆಸುತ್ತಿದ್ದೆವು. ಸಚಿವರ ನೇತೃತ್ವದ ಸಭೆಯ ನಿರ್ಣಯದಂತೆ ಮತ್ತು ಮೇಲಧಿಕಾರಿಗಳ ಸೂಚನೆಯಂತೆ ಈಗ ಕಾಮಗಾರಿ ಸ್ಥಗಿತಗೊಂಡಿದೆ. ಅಪಾಯ ಸೂಚಿಸುತ್ತಿದ್ದ ಹಳೆಯ ಒಣಗಿದ ಮರಗಳನ್ನು ಮಾತ್ರ ಕಡಿಯಲಾಗಿದೆ’ ಎಂದು ಸ್ಪಷ್ಟನೆ ನೀಡಿದರು.

ಈ ಸ್ಪಷ್ಟನೆಯಿಂದ ಕುಪಿತರಾದ ರೈತರು, ಸ್ಥಳೀಯರು ‘ನಿಮಗೆ ಕಾಮಗಾರಿ ನಡೆಸಲು ಟೆಂಡರ್‌ ಆಗಿದೆಯೇ? ಟೆಂಡರ್‌ ಆಗುವ ಮುನ್ನವೇ ಕಾಮಗಾರಿ ನಡೆಸಿದ್ದು ಏಕೆ? ಟೆಂಡರ್‌ ಕಾಪಿ ತೋರಿಸಿ’ ಎಂದು ಮುಗಿಬಿದ್ದರು. ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ನಿರ್ಣಯ ಮಂಡನೆ:

ಕೆಆರ್‌ಎಸ್‌ ಅಣೆಕಟ್ಟೆಗೆ ಧಕ್ಕೆ ತರುವ 20 ಕಿ.ಮೀ. ಪರಧಿಯೊಳಗೆ ಯಾವುದೇ ಯೋಜನೆಯನ್ನು ಮಾಡಬಾರದು ಮತ್ತು ಬೆಂಗಳೂರು ನಗರಕ್ಕೆ ನೀರು ಪೂರೈಸುವ ಕಾವೇರಿ 6ನೇ ಹಂತದ ಯೋಜನೆಯನ್ನು ರದ್ದು ಮಾಡಬೇಕು ಎಂಬುದು ಸೇರಿದಂತೆ ಒಟ್ಟು 7 ನಿರ್ಣಯಗಳನ್ನು ಕೈಗೊಂಡರು.

ರೈತ, ದಲಿತ, ಪ್ರಗತಿಪರ ಸಂಘಟನೆಗಳು ಮುಖಂಡರು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಕಾಮಗಾರಿ ನಡೆದ ಸ್ಥಳದತ್ತ ಹೊರಟ ರೈತರ ಗುಂಪನ್ನು ತಡೆದ ಪೊಲೀಸರು, ತಲಾ 10 ಮಂದಿಯ ತಂಡವನ್ನು ಮಾತ್ರ ಎರಡು ಬಾರಿ ಕಳುಹಿಸಿಕೊಟ್ಟರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಡ್ಯಾಂ ಬಳಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಒದಗಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.