ಹೆತ್ತೂರು: ‘ಅತಿವೃಷ್ಟಿ ಪೀಡಿತ ಪ್ರದೇಶಗಳ ಜನರಿಗೆ ನೆರವಾಗಲು ಆದಿಚುಂಚನಗಿರಿ ಮಠ ಸಿದ್ಧವಿದೆ’ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಹೋಬಳಿಯ ವಣಗೂರಿನ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆದಿಚುಂಚನಗಿರಿ ವೈದ್ಯಕೀಯ ಮಹಾ ವೈದ್ಯಕೀಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಮಲೆನಾಡು ಸ್ನೇಹ ಸೇವಾ ಸಂಘ, ತಾಲೂಕು ಒಕ್ಕಲಿಗರ ಸಂಘ, ಹೆತ್ತೂರು ಮತ್ತು ಯಸಳೂರು ಬೆಳೆಗಾರರ ಸಂಘ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿತ್ತು.
ಕೊಡಗು ಹಾಗೂ ಸಕಲೇಶಪುರದಲ್ಲಿ ಅತಿವೃಷ್ಟಿಯಿಂದ ಆಗಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಾರ್ಯದಲ್ಲಿಯೂ ಮಠ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು,‘ಶಿಕ್ಷಣ, ಉದ್ಯೋಗದಷ್ಟೇ ಆರೋಗ್ಯವೂ ಅಷ್ಟೇ ಮುಖ್ಯ. ತಪಾಸಣೆಯಿಂದ ಆರೋಗ್ಯ ರಕ್ಷಣೆ ಸಾಧ್ಯ ಎಂದು ಹೇಳಿದರು.
ಅತಿವೃಷ್ಟಿ ಪೀಡಿತ ಭಾಗದಲ್ಲಿ ಆದಿಚುಂಚನಗಿರಿ ಮಠ ಶಿಬಿರ ಆಯೋಜಿಸಿರುವುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಹಾಗೂ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಎಚ್.ಎಂ.ವಿಶ್ವನಾಥ್, ‘18ಕ್ಕೂ ಹೆಚ್ಚು ಕಾಯಿಲೆಗಳಿಗೆ ತಪಾಸಣೆ ನಡೆಸಲಾಗುತ್ತಿದೆ. ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮಂಡ್ಯ ಜಿಲ್ಲೆಯ ಮಠದ ಆಸ್ಪತ್ರೆಗೆ ಕಳುಹಿಸಿ ಒದಗಿಸಲಾಗುವುದು’ ಎಂದರು.
ಸಾವಿರಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದರು. ಕಣ್ಣು, ಮಧು ಮೇಹ ಕಾಯಿಲೆಗಳಿಗೆ ಜನ ಸರದಿ ಸಾಲಿನಲ್ಲಿ ನಿಂತು ತಪಾಸಣೆಗೆ ಒಳಗಾದರು.
ಶಾಖಾಮಠದ ಶಂಭುನಾಥ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಜಿ.ಪಂ ಸದಸ್ಯೆ ಉಜ್ಮಾರುಜ್ವಿ, ತಾ.ಪಂ ಅಧ್ಯಕ್ಷೆ ಶ್ವೇತಾ ಪ್ರಸನ್ನ, ಮಲೆನಾಡು ಸ್ನೇಹ ಸೇವಾ ಸಂಘದ ಅಧ್ಯಕ್ಷ ಪ್ರತಾಪ್ ಗೌಡ, ವಣಗೂರು ಗ್ರಾ.ಪ.ಅಧ್ಯಕ್ಷ ಆನಂದ್, ಕಸಾಪ ಅಧ್ಯಕ್ಷ ಜೈಮಾರುತಿ ದೇವರಾಜ್, ಜಾತಹಳ್ಳಿ ಪುಟ್ಟಸ್ವಾಮಿ, ಉದ್ಯಮಿ ಶಿವಕುಮಾರ್ ಜಗಾಟ, ಚಿದನ್, ಸಚ್ಚಿನ್ ಪ್ರಸಾದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.