ಹಲಗೂರು: ಹಿಂದೂ ಮುಸ್ಲಿಂ ಸಮುದಾಯದ ಭಾವೈಕ್ಯ ಸಾರುವ ಗಂಧದ ಹಬ್ಬ ಸಮೀಪದ ಅಂತರವಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭ್ರಮ ಸಡಗರದಿಂದ ನಡೆಯಿತು.
60 ವರ್ಷಗಳಿಂದಲೂ ಹುಲ್ಲಹಳ್ಳಿ ಮುಸ್ಲಿಂ ಸಮುದಾಯದಿಂದ ಗಂಧ ತರುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ಹುಲ್ಲಹಳ್ಳಿ ಗ್ರಾಮದಿಂದ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಭಕ್ತಾದಿಗಳು ಗಂಧ ತುಂಬಿದ ತಂಬಿಗೆಯನ್ನು ಹೊತ್ತು ತಂದರು. ಹೂವಿನಿಂದ ಅಲಂಕೃತವಾದ ಬಿದಿರಿನ ತಡಿಕೆಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಮಸೀದಿ ‘ಕರಿಂ ಉಲ್ಲಾ ಶಾಖಾದ್ರಿ’ ಅವರ ಸಮಾಧಿ ಮೇಲೆ ಅಲಂಕಾರ ಮಾಡಿದರು. ನಂತರ ಭಕ್ತಾದಿಗಳಿಗೆ ಗಂಧ ಪ್ರೋಕ್ಷಣೆ ಮಾಡಲಾಯಿತು.
ಗ್ರಾಮದಲ್ಲಿ ಹಿಂದೂ– ಮುಸ್ಲಿಮರು ಹಿಂದಿನಿಂದಲೂ ಭಾವೈಕ್ಯದಿಂದ ಬದುಕುತ್ತಿದ್ದಾರೆ. ಹಾಗಾಗಿಯೇ ವೀರಭದ್ರ ಸ್ವಾಮಿ ದೇವಾಲಯದ ಎದುರು ಅಲ್ ಹಜರತ್ ಸಯ್ಯದ್ ಮೊಹಮದ್ ಕರಿಂ ಉಲ್ಲಾ ಷಾ ಖಾದ್ರಿ ಬಾಗ್ದಾದಿ ಮಸೀದಿ ಇದೆ. ಗ್ರಾಮದ ಎಲ್ಲಾ ಹಿಂದೂಗಳು ಇಲ್ಲಿಗೆ ಬಂದು ಗಂಧದಕಡ್ಡಿ, ಕಲ್ಲು ಸಕ್ಕರೆ, ಕಡ್ಲೆ, ಪುರಿ ತಂದು ದೇವರಿಗೆಅರ್ಪಿಸಿ ಭಕ್ತಿ ಮೆರೆಯುತ್ತಾರೆ. ಪ್ರಸಾದವನ್ನು ಎಲ್ಲರೂ ಭಕ್ತಿಯಿಂದ ಸ್ವೀಕರಿಸುತ್ತಾರೆ.
ರಾಮನಗರ, ಚನ್ನಪಟ್ಟಣ, ಕನಕಪುರ, ಮೈಸೂರು, ಹಲಗೂರು ಸೇರಿದಂತೆ ವಿವಿಧಡೆಯಿಂದ ನೂರಾರು ಭಕ್ತರು ಆಗಮಿಸಿದ್ದರು.
ಮುಸ್ಲಿಂ ಮುಲ್ಲಾಗಳಿಂದ ನಡೆದ ಉರುಸ್ ಗಮನ ಸೆಳೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.