ADVERTISEMENT

ಹೇಮಾವತಿ ನದಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ: ಮೂಡಿಗೆರೆ ಬಿ.ಆರ್. ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 15:07 IST
Last Updated 18 ಡಿಸೆಂಬರ್ 2024, 15:07 IST
ಬಿ.ಆರ್. ಬಾಲಕೃಷ್ಣ
ಬಿ.ಆರ್. ಬಾಲಕೃಷ್ಣ   

ಕೆ.ಆರ್.ಪೇಟೆ: ‘ಹೇಮಾವತಿ ನದಿ ಉಗಮ ಸ್ಥಳ ಮತ್ತು ನದಿ ಕೊಳ್ಳದ ಸಮಗ್ರ ಅಭಿವೃದ್ಧಿಗಾಗಿ ಹೇಮಾವತಿ ನದಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು’ ಎಂದು ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಮೂಡಿಗೆರೆ ಬಿ.ಆರ್. ಬಾಲಕೃಷ್ಣ ಒತ್ತಾಯಿಸಿದ್ದಾರೆ.

‘ಹೇಮಾವತಿ ನದಿಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾಮದಲ್ಲಿ ಹುಟ್ಟಿ ಹಾಸನ ಜಿಲ್ಲೆಗೆ ಪ್ರವೇಶಿಸಿ ಮಂಡ್ಯ ಜಿಲ್ಲೆಯ  ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯೊಂದಿಗೆ ವಿಲೀನವಾಗುತ್ತದೆ. ಕಾವೇರಿಯ ಉಪನದಿಗಳಲ್ಲಿ ಹೆಚ್ಚು ಕಿ.ಮೀ. ಉದ್ದ ಹರಿಯುವ ಹೇಮಾವತಿ ನದಿಯು ಹಾಸನ, ಮಂಡ್ಯ, ಕೊಡಗು, ಮೈಸೂರು, ತುಮಕೂರು ಜಿಲ್ಲೆಗಳ ಲಕ್ಷಾಂತರ ಎಕರೆ ಭೂಮಿಗೆ ಆಸರೆಯಾಗಿದೆ. ಬೆಂಗಳೂರು ನಗರಕ್ಕೂ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕಾವೇರಿ ನದಿ ಕೊಳ್ಳದ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿರುವಂತೆ ಹೇಮಾವತಿ ನದಿ ಕೊಳ್ಳದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕು. ಜಾವಳಿ ಗ್ರಾಮವನ್ನು ತಲಕಾವೇರಿಯಂತೆ ಅಭಿವೃದ್ಧಿಗೊಳಿಸಿ ಪ್ರವಾಸಿ ಮತ್ತು ಯಾತ್ರಾ ಸ್ಥಳವಾಗಿ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು ಹೇಮಾವತಿ ನದಿ ಮೂಲ ಸಂರಕ್ಷಣೆ ಮತ್ತು ನದಿ ಕೊಳ್ಳದ ಅಭಿವೃದ್ಧಿಗೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಮತ್ತು ಚಿಕ್ಕಮಗಳೂರಿನವರೇ ಆಗಿರುವ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಈ ಸಂಬಂಧ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರಕ್ಕೆ ಕ್ರಮ ವಹಿಸಬೇಕು’ ಎಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.