ಕೆ.ಆರ್.ಪೇಟೆ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದರು. ಇದರಿಂದಾಗಿ ಇವರಿಬ್ಬರ ಅವಿರೋಧ ಆಯ್ಕೆ ಖಚಿತವಾಗಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟಣೆಯನ್ನು ತಡೆಹಿಡಿಯಲಾಗಿದೆ.
ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿತ್ತು. ಜೆಡಿಎಸ್ನಿಂದ ಆಯ್ಕೆಯಾಗಿ ಸಚಿವ ಕೆ.ಸಿ. ನಾರಾಯಣಗೌಡ ಅವರೊಂದಿಗೆ ಗುರುತಿಸಿಕೊಂಡಿದ್ದ ಮಹಾದೇವಿ ನಂಜುಂಡ ಅಧ್ಯಕ್ಷ ಸ್ಥಾನಕ್ಕೆ, ಹೊಸಹೊಳಲು ಗಾಯತ್ರಿ ಸುಬ್ರಹ್ಮಣ್ಯ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲವಾದ್ದರಿಂದ ಇವರಿಬ್ಬರ ಅವಿರೋಧ ಆಯ್ಕೆ ಖಚಿತವಾಗಿದೆ. ಜೆಡಿಎಸ್ ತನ್ನ 11 ಸದಸ್ಯರಿಗೆ ವಿಪ್ ಜಾರಿಗೊಳಿಸಿ ಮಹಾದೇವಿ ನಂಜುಂಡ ಅಧ್ಯಕ್ಷ ಸ್ಥಾನಕ್ಕೆ, ಹೊಸಹೊಳಲು ಗಾಯತ್ರಿ ಸುಬ್ರಹ್ಮಣ್ಯ ಅವರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಮತ ಚಲಾಯಿಸುವಂತೆ ಸೂಚಿಸಿತ್ತು.
ಆದರೆ 10 ಸದಸ್ಯರ ಬಲವನ್ನು ಹೊಂದಿದ್ದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ನಟರಾಜ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗಾಯತ್ರಿ ಅವರನ್ನು ಬೆಂಬಲಿಸುವಂತೆ ವಿಪ್ ನೀಡಿತ್ತು. ಆದರೆ ಬಿಜೆಪಿಯಿಂದ ಗೆದ್ದಿದ್ದ ಏಕೈಕ ಅಭ್ಯರ್ಥಿ ನಟರಾಜು ನಾಮಪತ್ರ ಸಲ್ಲಿಸಲಿಲ್ಲವಾದ್ದರಿಂದ ಕಾಂಗ್ರೆಸ್ ಮುಖಭಂಗ ಅನುಭವಿಸಿತು.
ಬಗೆಹರಿದ ಗೊಂದಲ: ಚುನಾವಣೆಯಲ್ಲಿ ಭಾಗವಹಿಸಿದ್ದ ಸಚಿವ ನಾರಾಯಣಗೌಡ ಬೆಳಿಗ್ಗೆ ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿ ಅಧ್ಯಕ್ಷ ಸ್ಥಾನದ ಮೊದಲ 15 ತಿಂಗಳ ಅವಧಿಗೆ ಮಹಾದೇವಿ ನಂಜುಂಡ, ನಂತರದ 15 ತಿಂಗಳ ಅವಧಿಗೆ ನಟರಾಜ್ ಅವರಿಗೆ ಅಧಿಕಾರ ನೀಡಲು ತೀರ್ಮಾನಿಸಿದರು. ಇದರಿಂದ ಬಿಜೆಪಿಯಲ್ಲಿ ಇದ್ದ ಆಂತರಿಕ ಭಿನ್ನಮತ ಬಗೆಹರಿದಂತಾಯಿತು. ನಾಮಪತ್ರ ಸಲ್ಲಿಕೆ ನಂತರ ಸದಸ್ಯರು ಸಚಿವ ನಾರಾಯಣಗೌಡರೊಂದಿಗೆ ವಿಜಯೋತ್ಸವ ಆಚರಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
‘ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಪಟ್ಟಣದ ಅಭಿವೃದ್ಧಿಯೇ ನಮ್ಮ ಗುರಿ. ನಮ್ಮ ಬೆಂಬಲಿಗರೇ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಆಡಳಿತವನ್ನು ಅಂತ್ಯಗೊಳಿಸಿದ್ದೇವೆ. ಇದರಿಂದ ಕೆಲಸ ಮಾಡಲು ಹೊಸ ಹುರುಪು ಬಂದಿದೆ. ₹ 14 ಕೋಟಿ ವೆಚ್ಚದಲ್ಲಿ ಪುರಸಭೆಯ ನೂತನ ಕಾರ್ಯಾಲಯದ ಕಟ್ಟಡ ಹಾಗೂ ಹೈಟೆಕ್ ವಾಣಿಜ್ಯ ಸಮುಚ್ಛಯದ ಕಾಮಗಾರಿಯು ಸದ್ಯದಲ್ಲಿಯೇ ಟೆಂಡರ್ ಆಗಲಿದೆ’ ಎಂದು ಸಚಿವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.