ಸಿದ್ದು ಆರ್.ಜಿ.ಹಳ್ಳಿ
ಮಂಡ್ಯ: ವರ್ಷಾಂತ್ಯದ ವೇಳೆಗೆ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಆದರೆ, ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯ ಡಿಸೆಂಬರ್ನಲ್ಲೂ ಭರ್ತಿಯಾಗಿದ್ದು, ಗರಿಷ್ಠ ನೀರಿನ ಮಟ್ಟ 124.80 ಅಡಿ ತಲುಪಿದೆ. ಇದು 30 ವರ್ಷಗಳಲ್ಲೇ ದಾಖಲೆ ಮಟ್ಟದ ನೀರಿನ ಸಂಗ್ರಹ ಎನಿಸಿದೆ.
ಕಳೆದ 30 ವರ್ಷಗಳ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ ಕೊನೆಯ ವಾರದಲ್ಲಿ (ಡಿ.25) ಪ್ರಸಕ್ತ ವರ್ಷ ಮಾತ್ರ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಭರ್ತಿಯಾಗಿರುವುದು ಕಂಡುಬರುತ್ತದೆ. 2021ರ ಡಿ.15ರ ವೇಳೆಯಲ್ಲಿ ಜಲಾಶಯ ಭರ್ತಿಯಾಗಿದ್ದರೂ, ಡಿ.25ರ ವೇಳೆಗೆ 124.22 ಅಡಿಗೆ ನೀರು ಇಳಿಕೆಯಾಗಿತ್ತು.
ಕೆಆರ್ಎಸ್ ಜಲಾಶಯವು 49.452 ಟಿಎಂಸಿ ಅಡಿ ನೀರಿನ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಅಷ್ಟೇ ಪ್ರಮಾಣದ ನೀರಿನ ಸಂಗ್ರಹವಿದೆ. ತಮಿಳುನಾಡಿಗೆ ಬಿಡಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನೇ ಈ ಬಾರಿ ಬಿಡಲಾಗಿದೆ.
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ 174 ಕೆರೆಗಳಲ್ಲಿ 142 ಕೆರೆಗಳು ಭರ್ತಿಯಾಗಿವೆ. ಉಳಿದ 20 ಕೆರೆಗಳಲ್ಲಿ ಶೇ 75ರಷ್ಟು, ಒಂದು ಕೆರೆಯಲ್ಲಿ ಶೇ 50ರಷ್ಟು ಮತ್ತು 3 ಕೆರೆಗಳಲ್ಲಿ ಶೇ 25ರಷ್ಟು ನೀರು ಸಂಗ್ರಹವಿದೆ. ಡ್ಯಾಂ ಮತ್ತು ಕೆರೆಗಳು ಭರ್ತಿಯಾಗಿರುವ ಕಾರಣ ಬೇಸಿಗೆ ಬೆಳೆಗೆ ನೀರು ಸಿಗಲಿದೆ ಎಂಬುದು ರೈತರ ಸಂತಸವಾಗಿದೆ.
ವಾಡಿಕೆಗಿಂತ ಹೆಚ್ಚು ಮಳೆ: ಪ್ರಸಕ್ತ ವರ್ಷ ಜನವರಿಯಿಂದ ಡಿಸೆಂಬರ್ವರೆಗೆ 692 ಮಿ.ಮೀ. ವಾಡಿಕೆ ಮಳೆಗೆ, 864 ಮಿ.ಮೀ.ನಷ್ಟು ಮಳೆಯಾಗಿದೆ. ಅಂದರೆ ಶೇ 24.8ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿಅಂಶಗಳು ತಿಳಿಸುತ್ತವೆ. ಕೇರಳದ ಕೆಲವು ಭಾಗ, ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಕೆಆರ್ಎಸ್ ಡ್ಯಾಂಗೆ ಉತ್ತಮ ಒಳಹರಿವು ಬಂದಿದೆ.
ನೀರಿನ ನಿರ್ವಹಣೆ: ‘ಈ ಬಾರಿ ಉತ್ತಮ ಮಳೆಯಾದ ಕಾರಣ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದೆ. ಕಳೆದ ವರ್ಷ ಅಣೆಕಟ್ಟೆಗೆ 136 ಹೊಸ ಗೇಟುಗಳನ್ನು ಅಳವಡಿಸಿದ ಪರಿಣಾಮ ನಿತ್ಯ ಪೋಲಾಗುತ್ತಿದ್ದ 1 ಸಾವಿರ ಕ್ಯುಸೆಕ್ ನೀರನ್ನು ತಡೆಗಟ್ಟಿದ್ದೇವೆ. 31 ಕಿ.ಮೀ. ಉದ್ದದ ನಾಲೆಗಳ ಆಧುನೀಕರಣ ಕಾಮಗಾರಿ ಹಾಗೂ ನೀರುಗಂಟಿಗಳು ಅತ್ಯುತ್ತಮವಾಗಿ ನೀರು ನಿರ್ವಹಣೆ ಮಾಡಿರುವುದು ಸೇರಿದಂತೆ ಇತರ ಕಾರಣಗಳಿಂದಾಗಿ ಕನ್ನಂಬಾಡಿ ಅಣೆಕಟ್ಟೆಯು ಡಿಸೆಂಬರ್ ಅಂತ್ಯದಲ್ಲೂ ಭರ್ತಿಯಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಮಂಡ್ಯ ವೃತ್ತದ ಅಧೀಕ್ಷಕ ಎಂಜಿನಿಯರ್ ರಘುರಾಂ ಮಾಹಿತಿ ನೀಡಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಪರಿಸರ ಮತ್ತು ಜಲ ಸಂರಕ್ಷಣೆಗೆ ಆದ್ಯತೆ ನಿಡಬೇಕಿದೆ. ಡ್ಯಾಂ ನೀರನ್ನು ಸಮರ್ಪಕವಾಗಿ ನಿರ್ವಹಿಸಿದರೆ ರೈತರಿಗೆ ಬೇಸಿಗೆ ಬೆಳೆಗೆ ನೀರು ಕೊಡಬಹುದುಸುನಂದಾ ಜಯರಾಂ ರೈತ ಮುಖಂಡರು
ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ವಿವರ (ಅಡಿಗಳಲ್ಲಿ)
ಜಲಾಶಯ;ಗರಿಷ್ಠ ಮಟ್ಟ;ಪ್ರಸ್ತುತ ಮಟ್ಟ;
ನೀರಿನ ಸಂಗ್ರಹ (ಶೇ) ಕೆಆರ್ಎಸ್;124.80;124.80;100 ಕಬಿನಿ;2284;2280.20;87.91 ಹೇಮಾವತಿ;2922;2909.45;70.80 ಹಾರಂಗಿ;2859;2835.76;43.82
154 ದಿನ ಜಲಾಶಯ ಭರ್ತಿ!
ಕೆಆರ್ಎಸ್ ಅಣೆಕಟ್ಟೆ ನಿರ್ಮಿಸಿದ ದಿನದಿಂದ ಇಲ್ಲಿಯವರೆಗೂ ಅಂದರೆ 90 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಂದು ವರ್ಷದಲ್ಲಿ ಬರೋಬ್ಬರಿ 154 ದಿನ ಅಣೆಕಟ್ಟೆಯು ಪೂರ್ಣ ಭರ್ತಿಯಾಗಿದೆ. ‘ಈ ಬಾರಿ ಜುಲೈ 25ಕ್ಕೆ ಮೊದಲ ಬಾರಿಗೆ ಡ್ಯಾಂ ಭರ್ತಿಯಾಗಿತ್ತು. ಅಲ್ಲಿಂದ ಡಿ.25ರವರೆಗೂ ಜಲಾಶಯ ಭರ್ತಿಯಾಗಿದೆ. ಮಧ್ಯದಲ್ಲಿ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ನೀರಿನ ಮಟ್ಟವನ್ನು ಅಲ್ಪಸ್ವಲ್ಪ ಇಳಿಕೆ ಮಾಡಲಾಗಿದೆ. 2009ರಲ್ಲಿ 146 ದಿನ 2022ರಲ್ಲಿ 114 ದಿನ ಡ್ಯಾಂ ತುಂಬಿತ್ತು’ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.