ADVERTISEMENT

ಮನೆಯೊಳಗೆ ಚಿರತೆ ಕೂಡಿ ಹಾಕಿದರು!

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 13:23 IST
Last Updated 10 ಏಪ್ರಿಲ್ 2020, 13:23 IST
ಮಂಚನಹಳ್ಳಿ ಗ್ರಾಮದ ತೋಟದ ಮನೆಯೊಳಗೆ ವಿಶ್ರಾಂತಿ ಪಡೆಯುತ್ತಿರುವ ಚಿರತೆ
ಮಂಚನಹಳ್ಳಿ ಗ್ರಾಮದ ತೋಟದ ಮನೆಯೊಳಗೆ ವಿಶ್ರಾಂತಿ ಪಡೆಯುತ್ತಿರುವ ಚಿರತೆ   

ಬೆಳಕವಾಡಿ (ಮಂಡ್ಯ ಜಿಲ್ಲೆ): ಕಾಡಿನಿಂದ ಆಹಾರ ಅರಸಿ ಬಂದ ಚಿರತೆಯೊಂದು ಗುರುವಾರ ರಾತ್ರಿ ಸಮೀಪದ ಮಂಚನಹಳ್ಳಿಯ ತೋಟದ ಮನೆಗೆ ನುಗ್ಗಿದೆ. ಇದನ್ನು ಕಂಡ ಯುವಕರು ಚಿರತೆಯನ್ನು ಮನೆಯೊಳಗೇ ಕೂಡಿ ಹಾಕಿದ್ದಾರೆ. ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಬೆಳಕವಾಡಿ ಗ್ರಾಮದ ಶ್ರೀನಿವಾಸ ಅವರ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಗುರುವಾರ ರಾತ್ರಿ 10.30ರ ವೇಳೆಯಲ್ಲಿ ಚಿರತೆ ಮನೆಯೊಳಗೆ ಪ್ರವೇಶಿಸಿದೆ. ಅದೇ ವೇಳೆ ತೋಟಕ್ಕೆ ಬಂದ ಇಬ್ಬರು ಯುವಕರು ಮನೆಯೊಳಗೆ ಚಿರತೆ ಘರ್ಜಿಸುತ್ತಿರುವುದನ್ನು ಗುರುತಿಸಿದ್ದಾರೆ. ಧೈರ್ಯ ಮಾಡಿ ಮನೆಯ ಸಮೀಪಕ್ಕೆ ಬಂದ ಯುವಕರು ಬಾಗಿಲು ಮುಚ್ಚಿ, ಹೊರಗಿನಿಂದ ಚಿಲಕ ಹಾಕಿಕೊಂಡಿದ್ದಾರೆ.

ಗುರುವಾರ ರಾತ್ರಿಯೇ ಯುವಕರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಸಂಪರ್ಕ ಸಾಧಿಸಲು ಸಾಧ್ಯವಾಗದ ಕಾರಣ ಚಿರತೆ ರಾತ್ರಿಯಿಡೀ ಮನೆಯೊಳಗೆ ಇರುವಂತಾಯಿತು. ಮನೆಯೊಳಗಿದ್ದ ಚಿರತೆಯನ್ನು ನೋಡಲು ಜನರು ತಂಡೋಪತಂಡವಾಗಿ ತೋಟದ ಮನೆಗೆ ಬಂದಿದ್ದರು. ಶುಕ್ರವಾರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾದರು.

ADVERTISEMENT

ವಲಯ ಅರಣ್ಯಾಧಿಕಾರಿ ಆಸಿಫ್ ಆಹಮದ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಕಾವೇರಿ ಅಭಯಾರಣ್ಯ ವಲಯಕ್ಕೆ ಚಿರತೆ ಬಿಡುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.