ಮದ್ದೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಎಳನೀರು ವ್ಯಾಪಾರಿಯೊಬ್ಬರು ಕೋವಿಡ್–19ನಿಂದಾಗಿ ಮೃತಪಟ್ಟ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿರುವ ಎಪಿಎಂಸಿ ಎಳನೀರು ಮಾರುಕಟ್ಟೆ ಹಾಗೂ ತಾಲ್ಲೂಕಿನ ಕೆ.ಎಂ.ದೊಡ್ಡಿ ಬಳಿ ಇರುವ ಗುಡಿಗೆರೆ ಎಳನೀರು ಮಾರುಕಟ್ಟೆಯನ್ನು ಬುಧವಾರದಿಂದ ಭಾನುವಾರದವರೆಗೆ ಒಟ್ಟು ಐದು ದಿನ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಗೆಜ್ಜಲಗೆರೆ ಮಹೇಂದ್ರ ತಿಳಿಸಿದರು.
ಈ ಬಗ್ಗೆ ಪಟ್ಟಣದ ಎಳನೀರು ಮಾರುಕಟ್ಟೆಯಲ್ಲಿ ನಡೆದ ವರ್ತಕರ ಸಂಘದ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ‘ಬುಧವಾರ ಬೆಳಿಗ್ಗೆ 7 ಗಂಟೆಯಿಂದ ಭಾನುವಾರ ರಾತ್ರಿ 9 ಗಂಟೆಯವರೆಗೆ 5 ದಿನ ವ್ಯಾಪಾರ ವಹಿವಾಟು ಬಂದ್ ಮಾಡಲಾಗುತ್ತಿದೆ. ರೈತರು ಹಾಗೂ ವರ್ತಕರು ಸಹಕರಿಸಬೇಕು ಕೋವಿಡ್ –19 ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಮಾರುಕಟ್ಟೆ ವ್ಯಾಪ್ತಿಯ ಎಲ್ಲಾ ಪ್ರಾಂಗಣಗಳಲ್ಲಿ, ಕಚೇರಿ ಹಾಗೂ ಅಂಗಡಿ ಮಳಿಗೆಗಳಲ್ಲಿ ಸೋಂಕು ನಿವಾರಕ ದ್ರಾವಕವನ್ನು ಸಿಂಪಡಿಸಲಾಗಿದೆ’ ಎಂದರು.
‘ಬಂದ್ಗೆ ವರ್ತಕರ ಸಂಘದವರು ಕೂಡ ಬೆಂಬಲ ನೀಡಿದ್ದು, ಮಾರುಕಟ್ಟೆ ಹೊರಗಡೆ ವ್ಯಾಪಾರವನ್ನು ನಿಷೇಧಿಸಲಾಗಿದೆ. ಯಾರಾದರೂ ಹೊರಗೆ ಎಳನೀರು ವ್ಯಾಪಾರ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಈ ವೇಳೆ ಎಪಿಎಂಸಿ ಉಪಾಧ್ಯಕ್ಷ ಹೊನ್ನಲಗೆರೆ ಸ್ವಾಮಿ ಹಾಗೂ ನಿರ್ದೇಶಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.