ADVERTISEMENT

ಲಿಂಗಪಟ್ಟಣ ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯಕೀಯ ತಂಡ

ಅನ್ನ ಸಂತರ್ಪಣೆ ಆಯೋಜಿಸಿದ್ದ ವೈದ್ಯ ಕುಟಂಬ, ಘಟನೆಗೆ ಕಾರಣರಾದವರ ಮೇಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 12:47 IST
Last Updated 29 ಅಕ್ಟೋಬರ್ 2020, 12:47 IST
ಲಿಂಗಪಟ್ಟಣ ಗ್ರಾಮಕ್ಕೆ ಗುರುವಾರ ಶಾಸಕ ಡಾ.ಕೆ.ಅನ್ನದಾನಿ ಭೇಟಿ ನೀಡಿ ಗ್ರಾಮಸ್ಥರು ಹಾಗೂ ವೈದ್ಯಕೀಯ ಸಿಬ್ಬಂದಿ ಜೊತೆ ಮಾತನಾಡಿದರು
ಲಿಂಗಪಟ್ಟಣ ಗ್ರಾಮಕ್ಕೆ ಗುರುವಾರ ಶಾಸಕ ಡಾ.ಕೆ.ಅನ್ನದಾನಿ ಭೇಟಿ ನೀಡಿ ಗ್ರಾಮಸ್ಥರು ಹಾಗೂ ವೈದ್ಯಕೀಯ ಸಿಬ್ಬಂದಿ ಜೊತೆ ಮಾತನಾಡಿದರು   

ಹಲಗೂರು (ಮಂಡ್ಯ ಜಿಲ್ಲೆ): ಸಮೀಪದ ಲಿಂಗಪಟ್ಟಣದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ 70 ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಸಿಬ್ಬಂದಿ ಗ್ರಾಮದಲ್ಲೇ ಬೀಡುಬಿಟ್ಟಿದ್ದು ಜನರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.

ಇಬ್ಬರು ವೈದ್ಯರು, ನಾಲ್ವರು ನರ್ಸ್‌ಗಳು, 10 ಮಂದಿ ಆಶಾಕಾರ್ತೆಯರ ತಂಡ ಗ್ರಾಮದಲ್ಲೇ ಇದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸುತ್ತಿದ್ದಾರೆ. ಪೊಲೀಸರ ತಂಡ ಕೂಡ ಗ್ರಾಮದಲ್ಲಿದ್ದು ಜನರು ಭಯಪಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಪ್ರಸಾದ ಸೇವನೆಯಿಂದ ಹೆಚ್ಚು ಸುಸ್ತಾಗಿದ್ದ 10 ಮಂದಿಯನ್ನು ಬುಧವಾರ ರಾತ್ರಿ ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಡಾ.ಕೆ.ಅನ್ನದಾನಿ, ಗ್ರಾಮದ ಶಾಲೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರನ್ನೂ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಿಸಿದರು.

ADVERTISEMENT

‘ಎಲ್ಲರ ಆರೋಗ್ಯ ಸ್ಥಿರವಾಗಿದೆ, ಪುಳಿಯೊಗರೆ ಸೇವಿಸಿದ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದೆ. ಭಯಪಡದಂತೆ ಜಾಗೃತಿ ಮೂಡಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ತಿಳಿಸಿದರು.

ವೈದ್ಯ ಕುಟುಂಬದಿಂದ ಅನ್ನದಾನ: ಲಿಂಗಪಟ್ಟಣ ಗ್ರಾಮದವರೇ ಆದ ವೈದ್ಯ ಕುಟುಂಬವೊಂದು ಮಂಗಳವಾರ ಮಾರಮ್ಮ ದೇವಿಗೆ ಪೂಜೆ ಆಯೋಜಿಸಿ ಅನ್ನಸಂತರ್ಪಣೆ ಮಾಡಿದ್ದರು. ಪ್ರಸಾದ ಸೇವಿಸಿದ ವೈದ್ಯ ಕುಟುಂಬ ಸದಸ್ಯರಿಗೂ ವಾಂತಿ, ಭೇದಿ ಕಾಣಿಸಿಕೊಂಡು ಚಿಕಿತ್ಸೆ ಪಡೆದಿದ್ದಾರೆ.

‘ಕೋವಿಡ್‌ ಅವಧಿಯಲ್ಲಿ ನಿಯಮ ಪಾಲನೆ ಮಾಡಬೇಕಾದ ವೈದ್ಯರ ಕುಟುಂಬ ಸದಸ್ಯರೇ ನಿಯಮ ಉಲ್ಲಂಘಿಸಿ ಅನ್ನ ಸಂತರ್ಪಣೆ ಮಾಡಿರುವುದು ತಪ್ಪು. ಘಟನೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೇನೆ’ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.