ಮೇಲುಕೋಟೆ: ಲಾಕ್ಡೌನ್ ಜಾರಿಯಾಗಿ 85 ದಿನಗಳ ನಂತರ ಇಲ್ಲಿಯ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸೋಮವಾರ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸುರಕ್ಷತಾ ಕ್ರಮಕ್ಕೆ ಆದ್ಯತೆ ನೀಡಲಾಗಿದೆ.
ದೇವರ ದರ್ಶನಕ್ಕೆ ಮಾತ್ರ ಮುಜರಾಯಿ ಇಲಾಖೆ ಅವಕಾಶ ಕಲ್ಪಿಸಿದೆ. ಬಂಡೀಕಾರರು ಮತ್ತು ಇತರ ನೌಕರ ವರ್ಗ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯದ ಒಳಾಂಗಣ ಮತ್ತು ಪ್ರವೇಶದ್ವಾರಗಳನ್ನು ತೊಳೆದು ಸ್ಯಾನಿಟೈಸ್ ಮಾಡಿದರು. ಭಕ್ತರು ಅಂತರ ಕಾಯ್ದುಕೊಳ್ಳಲು ದೇವಾಲಯದ ಒಳಾಂಗಣ ಮತ್ತು ಕೈಸಾಲೆಯ ಸುತ್ತ 6 ಅಡಿ ಅಂತರಕ್ಕೊಂದರಂತೆ ವೃತ್ತಾಕಾರದ ಗುರುತು ಮಾಡಿದರು.
ಸೋಮವಾರ ಬೆಳಿಗ್ಗೆಯಿಂದ ದೇವಾಲಯ ಪ್ರವೇಶಿಸುವ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ನೀಡಿ, ಸ್ಕ್ರೀನಿಂಗ್ ಒಳಪಡಿಸಲಾಗುತ್ತದೆ. ಪ್ರವೇಶದ್ವಾರದ ಬಳಿ ದೇಗುಲದ ಸಿಬ್ಬಂದಿ ಹಾಗೂ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಭಕ್ತರ ಮಾಹಿತಿಗಾಗಿ ಕೋವಿಡ್ 19 ಸಂಬಂಧ ಬ್ಯಾನರ್ ಅಳವಡಿಸಲಾಗುತ್ತಿದೆ.
ಇಲಾಖೆಯ ನಿಯಮದಂತೆ 65 ವರ್ಷ ಮೇಲ್ಪಟ್ಟ, 10 ವರ್ಷದೊಳಗಿನ ಮಕ್ಕಳಿಗೆ ಹಾಗೂ ಮಾಸ್ಕ್ ಧರಿಸದವರಿಗೆ ಕಡ್ಡಾಯವಾಗಿ ಪ್ರವೇಶ ನಿಷೇಧಿಸಲಾಗಿದೆ.
ದೇಗುಲದಲ್ಲಿ ಭಕ್ತರಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.30 (ಪೂಜಾ ಸಮಯ ಹೊರತು ಪಡಿಸಿ ) ಮತ್ತು ಸಂಜೆ 4 ರಿಂದ 6 ರವರೆಗೆ ದರ್ಶನಕ್ಕೆ ಅವಕಾಶವಿದೆ. ನಂತರ ದೇಗುಲಕ್ಕೆ ಪ್ರವೇಶ ಇರುವುದಿಲ್ಲ.
ಬೆಟ್ಟದ ನರಸಿಂಹನ ದೇಗುಲದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30 ದರ್ಶನ ಇರುತ್ತದೆ. ಆದರೆ ಸಂಜೆಯ ಪೂಜೆಯ ವೇಳೆ ಎರಡೂ ದೇಗುಲದಲ್ಲಿ ಭಕ್ತರಿಗೆ ದರ್ಶನ ಇರುವುದಿಲ್ಲ, ರಜಾದಿನಗಳಂದು 1.30 ರವರಗೆ ದರ್ಶನಕ್ಕೆ ಅವಕಾಶವಿದೆ. ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಸೇರಿದಂತೆ ಯಾವುದೇ ಪೂಜೆಗೆ ಅವಕಾಶವಿಲ್ಲ.
ಭಕ್ತರು ತೆಂಗಿನಕಾಯಿ ಹೂ, ಹಣ್ಣು ಸೇರಿದಂತೆ ಭಕ್ತರು ಯಾವುದೇ ಪೂಜಾ ಸಾಮಗ್ರಿ ತರಬಾರದು. ಸುಗಮ ದರ್ಶನಕ್ಕೆ ಸಹಕಾರ ನೀಡಬೇಕು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.