ADVERTISEMENT

ಮಂಡ್ಯ: ‘ಮಿಮ್ಸ್‌’ ಜಾಗ ಉಳಿವಿಗಾಗಿ ಜಾಥಾ 15ರಿಂದ

ತಿಂಗಳಾದರೂ ಸಕ್ರಿಯವಾಗದ ನೂತನ ಸಮಿತಿ: ಜಯರಾಮ್‌ ಆರೋಪ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:23 IST
Last Updated 2 ಆಗಸ್ಟ್ 2025, 6:23 IST
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊರನೋಟ
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊರನೋಟ   

ಮಂಡ್ಯ: ‘ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಸೇರಿದ ನಗರದ ತಮಿಳು ಕಾಲೊನಿ ಜಾಗ ಉಳಿವಿಗಾಗಿ ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಆ.15ರಿಂದ ಎರಡನೇ ಹಂತದ ಜಾಗೃತಿ ಜಾಥಾ ನಡೆಸಲಾಗುವುದು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಒಂದು ತಿಂಗಳ ಹಿಂದೆ ನಗರದಲ್ಲಿ ಒಂದು ದಿನದ ಜಾಗೃತಿ ಜಾಥಾ ನಡೆಸಲಾಗಿತ್ತು. ಆದರೂ ತಮಿಳು ಕಾಲೊನಿ ನಿವಾಸಿಗಳ ಸ್ಥಳಾಂತರ ವಿಚಾರವಾಗಿ ಮಿಮ್ಸ್ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಯಾವುದೇ ಕ್ರಮ ವಹಿಸಿಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ನಾನಾ ಸಂಘಟನೆಗಳ ನೇತೃತ್ವದಲ್ಲಿ ತಿಂಗಳ ಹಿಂದೆ ನಡೆಸಿದ್ದ ರ‍್ಯಾಲಿಗೆ ಸ್ಪಂದಿಸಿದ್ದ ಜಿಲ್ಲಾಡಳಿತವು, ಜಿಲ್ಲಾಸ್ಪತ್ರೆಗೆ ಸೇರಿದ ಜಾಗವನ್ನು ಸರ್ವೆ ನಡೆಸಿ ಒತ್ತುವರಿದಾರರಿಗೆ ನೋಟಿಸ್‌ ಜಾರಿಗೊಳಿಸುವ ಮತ್ತು ಹೈಕೋರ್ಟ್ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ಸಂಬಂಧ ಸಮಿತಿಯೊಂದನ್ನು ರಚಿಸಲಾಗಿತ್ತು. ಆದರೆ, ಈ ಸಮಿತಿ ಕೂಡ ಒಂದು ತಿಂಗಳಾದರೂ ಯಾವುದೇ ಚಟುವಟಿಕೆಗಳನ್ನು ನಡೆಸಿಲ್ಲವೆಂದು ಆರೋಪಿಸಿದರು.

ADVERTISEMENT

‘ಮಂಡ್ಯ ಜಿಲ್ಲಾಸ್ಪತ್ರೆಗೆ ಸೇರಿದ 24 ಎಕರೆಗೂ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ. ಇದರಲ್ಲಿ ಎಂಟತ್ತು ಎಕರೆ ಪ್ರದೇಶವು ತಮಿಳು ಕಾಲೊನಿ ಪಾಲಾಗಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಕೋರ್ಟ್ ಆದೇಶಕ್ಕೆ ಸಡ್ಡು ಹೊಡೆದು ವಾಸವಿರುವ ತಮಿಳು ನಿವಾಸಿಗಳನ್ನು ಸ್ಥಳಾಂತರಿಸಿ, ಅವರಿಗೆ ನಿಗದಿಪಡಿಸಿರುವ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಬೇಕು. ಬಲಾಢ್ಯರು ಮಾಡಿಕೊಂಡಿರುವ ಎಲ್ಲ ಒತ್ತುವರಿಯನ್ನು ತೆರವುಗೊಳಿಸಬೇಕು. ಈ ವಿಚಾರದಲ್ಲಿ ಯಾವುದೇ ಮುಲಾಜು, ಪ್ರಭಾವಕ್ಕೆ ಜಿಲ್ಲಾಡಳಿತ ಒಳಗಾಗಬಾರದು’ ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ಕೆಆರ್‌ಎಸ್ ಪಕ್ಷದ ಜಿಲ್ಲಾ ಪ್ರಧಾನ ಕರ‍್ಯದರ್ಶಿ ಚಂದ್ರು ಕೀಲಾರ, ಉಪಾಧ್ಯಕ್ಷ ಮಲ್ಲೇಶ್ ಹಾಜರಿದ್ದರು.

‘ಟ್ರಾಮಾಕೇರ್‌ ಸೆಂಟರ್‌ ಸ್ಥಾಪಿಸಿ’

ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ ಮಂಡ್ಯ ಜನತೆಗೆ ಆರೋಗ್ಯ ಸೇವೆ ಕಲ್ಪಿಸಲು ತಮಿಳು ಕಾಲೊನಿ ನಿವಾಸಿಗಳ ಸ್ಥಳಾಂತರ ಅನಿವಾರ್ಯವಾಗಿದೆ. ಆ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಟ್ರಾಮಾಕೇರ್ ಸೆಂಟರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ತಮಿಳು ಕಾಲೊನಿ ತೆರವುಗೊಳಿಸದಂತೆ ನಿವಾಸಿಗಳು 2023ರಲ್ಲೇ ತಡೆಯಾಜ್ಞೆ ತಂದಿದ್ದಾರೆ. ಇಷ್ಟು ವರ್ಷವಾದರೂ ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ ಜಿಲ್ಲಾಡಳಿತ ಮಿಮ್ಸ್ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹೆಜ್ಜೆ ಇಟ್ಟಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ಕೂಡಲೇ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.