ADVERTISEMENT

‘ಗಣಿಗಾರಿಕೆ ರಾಜಧನ ವಂಚಿಸುವ ವ್ಯಕ್ತಿಗೆ ಮತ ನೀಡದಿರಿ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 16:17 IST
Last Updated 23 ಜನವರಿ 2023, 16:17 IST
ಪಾಂಡವಪುರ ತಾಲ್ಲೂಕಿನ ಮಾಡರಹಳ್ಳಿಯ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಸಂಸದೆ ಸುಮಲತಾ ಅಂಬರೀಷ್ ಚಾಲನೆ ನೀಡಿದರು
ಪಾಂಡವಪುರ ತಾಲ್ಲೂಕಿನ ಮಾಡರಹಳ್ಳಿಯ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಸಂಸದೆ ಸುಮಲತಾ ಅಂಬರೀಷ್ ಚಾಲನೆ ನೀಡಿದರು   

ಮೇಲುಕೋಟೆ: ‘4 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ. ಕ್ಷೇತ್ರದ ಜನ ಗಣಿಗಾರಿಕೆಯಿಂದ ಬರುತ್ತಿದ್ದ ರಾಜಧನ ವಂಚಿಸುವವರ ವಿರುದ್ಧ ಜಾಗೃತರಾಗಿ ಮುಂದಿನ ಚುನಾವಣೆ ಎದುರಿಸಿ’ ಎಂದು ಶಾಸಕ ಸಿ.ಎಸ್ ಪುಟ್ಟರಾಜು ಹೆಸರು ಪ್ರಸ್ತಾಪಿಸದೆ ಸಂಸದೆ ಸುಮಲತಾ ಅಂಬರೀಶ್ ಸಾರ್ವಜನಿಕರಿಗೆ ಕರೆ ನೀಡಿದರು.

ಇಲ್ಲಿನ ಮಾಡರಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸಂಸದರಿಗೆ ಹಂಚಿಕೆಯಾಗಿದ್ದ ₹ 11 ಲಕ್ಷ ಅನುದಾನದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗಣಿಗಾರಿಕೆಯಿಂದ ಪಾವತಿಯಾಗುವ ರಾಜಧನ ಜಿಲ್ಲೆಯ ಅಭಿವೃದ್ಧಿಗೆ ಬಳಕೆಯಾಗುತ್ತದೆ. ಅದಕ್ಕಾಗಿ ರಾಜಧನ ವಂಚಿಸಿ ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ಹೋರಾಟ ಮಾಡಿದ್ದೇನೆ. ತಾಲ್ಲೂಕಿನಲ್ಲಿ ಕೆಲ ಪ್ರಭಾವಿಗಳು ಸರ್ಕಾರಕ್ಕೆ ಪಾವತಿಸಬೇಕಾದ ರಾಜಧನವನ್ನು ವಂಚಿಸಿ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದರು. ಸಂಸದೆಯಾಗಿ ಅಂಥವರ ವಿರುದ್ಧ ಹೋರಾಟ ಮಾಡಿದ ಪರಿಣಾಮ ರಾಜಧನದ ಹಣ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿದೆ ಎಂದರು.

ADVERTISEMENT

ಜಿಲ್ಲೆಯ ಜನ ಭಾವನಾತ್ಮಕವಾಗಿ ಯೋಚನೆ ಮಾಡುತ್ತಾರೆ. ಕೇವಲ ಭಾವುಕರಾದರೆ ಪ್ರಯೋಜನವಿಲ್ಲ. ಗ್ರಾಮಗಳು ಮತ್ತು ತಾಲ್ಲೂಕು ಅಭಿವೃದ್ಧಿಗಾಗಿ ವಿವೇಚನೆಯಿಂದ ಮತ ನೀಡಬೇಕಿದೆ. ಕ್ಷೇತ್ರದ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಭರವಸೆ ಕೊಟ್ಟು ಮಾಡಿಲ್ಲ ಎಂದು ನೀವೇ ಆರೋಪಿಸುತ್ತಿದ್ದೀರಿ. ಹೀಗಾಗಿ ಜಾಗೃತರಾಗಿ ಮತ ನೀಡಬೇಕು. ಸಂದರ್ಭ ಬಂದಾಗ ಯಾರಿಗೆ ಮತ ನೀಡಬೇಕು ಎಂದು ಸ್ಪಷ್ಟವಾಗಿ ತಿಳಿಸುತ್ತೇನೆ ಎಂದರು.

ತಹಶೀಲ್ದಾರ್ ಕುಮಾರ್, ಬಿಇಒ ಜಿ.ಎ.ಲೋಕೇಶ್, ಕಂದಾಯ ನಿರೀಕ್ಷಕರಾದ ಮಹದೇವಸ್ವಾಮಿ, ಶಿವಪ್ರಕಾಶ್, ಮುಖಂಡರಾದ ದೀಪು, ಶೋಭಾ ಕುಮಾರ್, ಗ್ರಾಪಂ ಸದಸ್ಯ ಶಂಕರ್, ಎಸ್‌ಡಿಎಂಸಿ ಅಧ್ಯಕ್ಷ ಚೆಲುವರಾಜು, ಶೇಖರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.