ನಾಗಮಂಗಲ: ಸುಮಾರು ಮೂರು ತಿಂಗಳಿಂದ ಕಷ್ಟಪಟ್ಟು ಬೆಳೆದ ಬೆಳೆ ಲಾಕ್ಡೌನ್ ಹಿನ್ನೆಲೆಯಲ್ಲಿ ಕೈಗೆ ಬರದೇ ಹೊಲದಲ್ಲೇ ಒಣಗಿಹೋಗುತ್ತಿದ್ದು ರೈತ ಕಂಗಾಲಾಗಿದ್ದಾರೆ.
ತಾಲ್ಲೂಕಿನ ದೇವಲಾಪುರ ಹೋಬಳಿಯ ಹರದನಹಳ್ಳಿ ಗ್ರಾಮದ ಸತೀಶ್, ಹೊಸಕೆರೆಯ ಬಳಿ ಜಮೀನಿನಲ್ಲಿ ಒಂದೂವರೆ ಎಕರೆ ಎಲೆಕೋಸು ಮತ್ತು ಒಂದು ಎಕರೆಯಲ್ಲಿ ಸುನಾಮಿ (ದೋಸೆ ಮತ್ತು ಇಡ್ಲಿಗೆ) ಬೆಳೆಯನ್ನು ಬೆಳೆಯಲು ಸುಮಾರು ₹ 2.10 ಲಕ್ಷದ ಖರ್ಚು ಮಾಡಿದ್ದು ಉತ್ತಮ ಬೆಳೆ ಬಂದ ಹಿನ್ನೆಲೆಯಲ್ಲಿ ಉತ್ತಮ ಲಾಭ ಬರುವ ನಿರೀಕ್ಷೆ ಹೊಂದಿದ್ದರು.
ಕಟಾವಿಗೆ ಬಂದ ಒಂದೂವರೆ ಎಕರೆ ಎಲೆಕೋಸು ಮತ್ತು ಒಂದು ಎಕರೆ ಸುನಾಮಿ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಉತ್ತಮ ಬೆಲೆಯೂ ಇಲ್ಲದ ಕಾರಣ ಬೆಳೆಯನ್ನು ಕಟಾವು ಮಾಡಿಸಿದರೆ ಅದಕ್ಕೆ ತಗಲುವ ಕೂಲಿಯೂ ಸಹ ಹೆಚ್ಚಾಗಿ ಈಗ ಆಗಿರುವ ನಷ್ಟದಲ್ಲಿ ಮತ್ತಷ್ಟು ನಷ್ಟವಾಗುವ ಭೀತಿಯಲ್ಲಿ ಇದ್ದು, ಬೆಳೆ ಹೊಲದಲ್ಲಿಯೇ ಒಣಗಿ ಹೋಗುತ್ತಿದೆ.
ಖರ್ಚು ತೆಗೆದು ₹ 4 ಲಕ್ಷ ಲಾಭ ಬರುವುದು ಎಂಬ ನಿರೀಕ್ಷೆಯಲ್ಲಿ ಇದ್ದ ರೈತನ ಎಲೆಕೋಸಿಗೆ ಕೆ.ಜಿಗೆ ₹ 2 ಕೊಡುತ್ತೇವೆ ಎನ್ನುತ್ತಾರಂತೆ ಮಧ್ಯವರ್ತಿಗಳು. ಸರ್ಕಾರ ನಮ್ಮತ್ತ ಗಮನಹರಿಸಿ ಅಗತ್ಯ ಪರಿಹಾರ ನೀಡಬೇಕು, ಬೆಳೆಯನ್ನು ಬಡವರಿಗೆ ಹಂಚಬೇಕು ಎಂದು ರೈತ ಸತೀಶ್ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.