ADVERTISEMENT

ಕೈಗಾರಿಕಾ ಆಕ್ಸಿಜನ್‌ ಸಿಲಿಂಡರ್‌ ವಶ

ಕೈಗಾರಿಕಾ ಪ್ರದೇಶ, ಶ್ರೀರಂಗಪಟ್ಟಣದ ಹೆದ್ದಾರಿ ಕಾಮಗಾರಿ ಕಂಪನಿ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 1 ಮೇ 2021, 7:51 IST
Last Updated 1 ಮೇ 2021, 7:51 IST
ಮಂಡ್ಯ ತಾಲ್ಲೂಕಿನ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ತಹಶೀಲ್ದಾರ್‌ ಚಂದ್ರಶೇಖರ್‌ ಶಂ.ಗಾಳಿ ಅವರು ದಾಳಿ ನಡೆಸಿ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದರು
ಮಂಡ್ಯ ತಾಲ್ಲೂಕಿನ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ತಹಶೀಲ್ದಾರ್‌ ಚಂದ್ರಶೇಖರ್‌ ಶಂ.ಗಾಳಿ ಅವರು ದಾಳಿ ನಡೆಸಿ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದರು   

ಮಂಡ್ಯ: ಮಂಡ್ಯ, ಮದ್ದೂರು ತಾಲ್ಲೂಕಿನ ಕೈಗಾರಿಕಾ ಪ್ರದೇಶ, ಶ್ರೀರಂಗಪಟ್ಟಣ ತಾಲ್ಲೂಕಿನ ಹೆದ್ದಾರಿ ನಿರ್ಮಾಣ ಕಾಮಗಾರಿ ಕ್ಯಾಂಪ್‌ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿದ ತಹಶೀಲ್ದಾರ್‌ಗಳು ನೂರಕ್ಕೂ ಹೆಚ್ಚು ಆಕ್ಸಿಜನ್‌ ಖಾಲಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆ ಎದುರಾಗಿರುವ ಕಾರಣ ಕೈಗಾರಿಕಾ ಉದ್ದೇಶಕ್ಕಾಗಿ ಇಟ್ಟುಕೊಂಡಿರುವ ಆಕ್ಸಿಜನ್ ಸಿಲಿಂಡರ್‌ಗಳನ್ನು ನೀಡು ವಂತೆ ಸರ್ಕಾರ ಮನವಿ ಮಾಡಿತ್ತು. ಆದರೂ ಕೈಗಾರಿಕೆಗಳಲ್ಲಿ ಹಾಗೆಯೇ ಸಿಲಿಂಡರ್‌ಗಳನ್ನು ಇಟ್ಟುಕೊಳ್ಳಲಾಗಿತ್ತು. ಅಲ್ಲದೆ, ಬೆಂಗಳೂರಿಗೆ ಸಾಗಿಸುವ ನಿಟ್ಟಿ ನಲ್ಲಿ ಯಾರಿಗೂ ತಿಳಿಯದಂತೆ ದಾಸ್ತಾನು ಇಡಲಾಗಿತ್ತು ಎಂದು ತಿಳಿದು ಬಂದಿದೆ.

ಮಂಡ್ಯ ತಾಲ್ಲೂಕಿನ ತೂಬಿನಕೆರೆ ಕೈಗಾರಿಕಾ ಪ್ರದೇಶದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ತಯಾರಿಕೆಯ ಪವರ್ ರೀಚ್ ಕಂಪನಿಗೆ ಗುರುವಾರ ರಾತ್ರಿ ದಾಳಿ ನಡೆಸಿದ ತಹಶೀಲ್ದಾರ್‌ ಚಂದ್ರಶೇಖರ ಶಂ.ಗಾಳಿ ಅವರು 70 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಕಂಪನಿಯಲ್ಲಿ 77 ಸಿಲಿಂಡರ್‌ಗಳು ಇದ್ದವು. ಇದರಲ್ಲಿ ಆಕ್ಸಿಜನ್‌ ತುಂಬಲು ಅನುಕೂಲವಾದ 70 ಜಂಬೋ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳ ಲಾಗಿದ್ದು, ಇವುಗಳನ್ನು ಮಂಡ್ಯ ಸೆಂಟ್ರಲ್‌ ಗೋದಾಮಿಗೆ ಸಾಗಿಸಲಾಗಿದೆ. 40 ಸಿಲಿಂಡರ್‌ಗಳು ಬಳಸಬಹುದಾದ ಸ್ಥಿತಿಯಲ್ಲಿದ್ದು, 30 ಸಿಲಿಂಡರ್‌ಗಳನ್ನು ಶುಚಿಗೊಳಿಸಿ ಬಳಸಲಾಗುವುದು. ಅಲ್ಲದೆ ಶುಕ್ರವಾರ ತೂಬಿನಕೆರೆಯ ಪ್ರಕಾಶ್‌ ಬಾಡಿ ಬಿಲ್ಡರ್ಸ್‌ನಲ್ಲಿ 18‌, ರೈಲ್ವೇ ವರ್ಕ್‌ ಶಾಪ್‌ನಲ್ಲಿ 11 ಸಿಲಿಂಡರ್‌ಗಳನ್ನು ಗುರುತಿಸಲಾಗಿದ್ದು, ಆಕ್ಸಿಜನ್‌ ಬಳಕೆಗೆ ಅನುಕೂಲವಾಗಲಿದೆಯೇ ಎಂಬ ಬಗ್ಗೆ ತಾಂತ್ರಿಕ ತಂಡದಿಂದ ಮಾಹಿತಿ ಪಡೆದು ವಶಪಡಿಸಿಕೊಳ್ಳಲಾಗುವುದು ಎಂದು ಚಂದ್ರಶೇಖರ್‌ ತಿಳಿಸಿದರು.

ಕಂದಾಯಾಧಿಕಾರಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಕಿಶೋರ್, ನಂದಿನಿ, ಮಂಡ್ಯ ಗ್ರಾಮಾಂತರ ಸಿಪಿಐ ಆನಂದೇಗೌಡ, ಪಿಎಸ್‌ಐ ಮಹೇಶ್, ರಮೇಶ್ ಕರ್ಕಿ ಇದ್ದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ‌ ನಡೆಸುತ್ತಿರುವ ಡಿಬಿಎಲ್ ಗುತ್ತಿಗೆ ಕಂಪನಿಯ ಕ್ಯಾಂಪ್‌ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿದ ತಹಶೀಲ್ದಾರ್‌ ಎಂ.ವಿ.ರೂಪಾ ನೇತೃತ್ವದ ತಂಡ 35 ಆಕ್ಸಿಜನ್‌ ಖಾಲಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಮತ್ತು ಸೋಮನಹಳ್ಳಿ ಕೈಗಾರಿಕಾ ಪ್ರದೇಶ, ಸಕ್ಕರೆ ಕಾರ್ಖಾನೆ, ಹೆದ್ದಾರಿ ಕಾಮಗಾರಿ ಕ್ಯಾಂಪ್‌ಗಳಿಗೆ ತಹಶೀಲ್ದಾರ್ ವಿಜಯ್ ಕುಮಾರ್ ದಾಳಿ ನಡೆಸಿ ಸುಮಾರು 45 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವೆಲ್ಪ್ ಸನ್ ಕಾರ್ಪ್ (20), ಸನ್ಮ ಡೈಮಂಡ್ ಟೂಲ್ಸ್ ಪ್ರವೆಟ್‌ ಲಿಮಿಟೆಡ್ (4), ಬಾಲಾಜಿ ಮಾಲ್ಟ್ ಪ್ರವೆಟ್‌ ಲಿಮಿಟೆಡ್ (5), ‌ಹಿಟೆನ್ ಪಾಸ್ಟೆನರ್ಸ್ (2) ಹಾಗೂ ಹೆದ್ದಾರಿ ಕಾಮಗಾರಿಯ ಡಿಬಿಎಲ್ ಕಂಪನಿ (10), ಚಾಮುಂಡೇ ಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ 5 ಸೇರಿ ತಾಲ್ಲೂಕಿನಾದ್ಯಂತ 46 ಸಿಲಿಂಡರ್‌ ವಶಪಡಿಸಿಕೊ ಳ್ಳಲಾಗಿದೆ ಎಂದು ವಿಜಯ್‌ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.