ಬೆಳಕವಾಡಿ: ಅಭಿವೃದ್ಧಿ ಕಾರ್ಯಗಳಿಗೆ ಪಿಡಿಒ ಎಂ.ಪಿ. ಮಹೇಶ್ ಬಾಬು ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಅಧ್ಯಕ್ಷರು, ಸದಸ್ಯರು ಇಲ್ಲಿನ ಸರಗೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯನ್ನು ವಿಸರ್ಜಿಸಿದರು.
ಸದಸ್ಯರಾದ ರವಿಕುಮಾರ್, ಎಂ.ಮಾದಪ್ಪ, ಚಂದ್ರಹಾಸ ಮಾತನಾಡಿ, ‘ಪಿಡಿಒ ಎಂ.ಪಿ.ಮಹೇಶ್ ಬಾಬು ಅವರು ಗ್ರಾಮಗಳಿಗೆ ಬೀದಿ ದೀಪದ ಸೌಲಭ್ಯ, ಚರಂಡಿ ಸ್ವಚ್ಛತೆ ಹಾಗೂ ಇ– ಸ್ವತ್ತುಗಳನ್ನು ಸರಿಯಾಗಿ ಮಾಡಿ ಕೊಡುತ್ತಿಲ್ಲ, ಹಲವು ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ್ದರೂ ಇದುವರೆಗೂ ಯಾವುದೇ ಕೆಲಸಗಳು ಕಾರ್ಯರೂಪಕ್ಕೆ ಬಂದಿಲ್ಲ. ಇವರು ಬೆಂಗಳೂರಿನಿಂದ ಪಂಚಾಯಿತಿಗೆ 12 ಗಂಟೆಗೆ ಬಂದು 4 ಗಂಟೆಗೆ ಹೋಗುತ್ತಾರೆ’ ಎಂದು ಆರೋಪಿಸಿದರು.
‘ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ದೂರು ನೀಡಲಾಗುವುದು’ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ. ಶಾಲಿನಿ, ಉಪಾಧ್ಯಕ್ಷ ಕೆ.ನಾಗರಾಜು, ಸದಸ್ಯರಾದ ಆರ್. ರವಿಕುಮಾರ್, ಎಂ. ಮಾದಪ್ಪ, ಚಂದ್ರಹಾಸ, ಎಸ್.ಆರ್. ರೇವಣ್ಣಸ್ವಾಮಿ, ಬಿ.ಪಿ. ಶಿವಶಂಕರ್, ಎಚ್.ಎಂ. ಧರ್ಮರಾಜು, ಮಲ್ಲಣ್ಣ , ಪಿಡಿಒ ಎಂ.ಪಿ. ಮಹೇಶ್ ಬಾಬು, ದ್ವಿತೀಯ ದರ್ಜೆ ಲೆಕ್ಕಸಹಾಯಕ ಗಣೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.