ಕೊಪ್ಪ: ಉತ್ತರಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಮತ್ತು ಕೊಲೆಗಳಂಹ ಹೀನ ಕೃತ್ಯಗಳನ್ನು ನಿಯಂತ್ರಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಕೊಪ್ಪ ಸಮಾನ ಮನಸ್ಕರರ ಒಕ್ಕೂಟದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಯೋಗಿ ಆದಿತ್ಯನಾಥ್ ಅವರ ಪ್ರತಿಕೃತಿದಹಿಸಿದ ಪ್ರತಿಭಟನಾಕಾರರು ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಗೆ ಕಡಿವಾಣ ಇಲ್ಲದಂತಾಗಿದೆ. ಮಹಿಳೆಯರ ಕಗ್ಗೊಲೆಗಳು ಸಾಮಾನ್ಯವಾಗಿವೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಯೋಗಿ ಆದಿತ್ಯನಾಥ್ ಅವರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಪರಿಶಿಷ್ಟ ಜಾತಿಗೆ ಸೇರಿದ ಯುವತಿಯನ್ನು ಸಾಮೂಹಿಕ ಅತ್ಯಚಾರ ಮಾಡಿ ಕೊಂದು, ನಡು ರಾತ್ರಿಯಲ್ಲಿ ಶವವನ್ನು ಸುಟ್ಟು ಹಾಕಿರುವ ಹೃದಯವಿದ್ರಾವಕ ಘಟನೆ ಮನಕಲುಕುತ್ತಿದೆ. ಶವವನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡದೆ ಮತ್ತು ಕುಟುಂಬದವರಿಗೆ ಶವವನ್ನು ಹಸ್ತಾಂತರಿಸದೆ ಅವಮಾನ ಮಾಡಲಾಗಿದೆ. ಸಂತ್ರಸ್ತೆಯ ಕುಟುಂಬಕ್ಕೆ ತಕ್ಷಣ ₹ 1 ಕೋಟಿ ಪರಿಹಾರ ಘೋಷಿಸಬೇಕು. ಅತ್ಯಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಗಾಯಕ ಹುರುಗಲವಾಡಿ ರಾಮಯ್ಯ, ವಿವಿಧ ಸಂಘಟನೆಗಳ ಮುಖಂಡರಾದ ತಗ್ಗಹಳ್ಳಿ ಸುಂದರೇಶ್, ಬಿ.ಪಿ. ಗಿರೀಶ್, ಶಂಕರ್, ಜನಾರ್ದನ, ತರಿಕೆರೆ ಕಾಲೋನಿ ರಮಾನಂದ, ತೋಟದಮನೆ ನಾಗೇಶ್, ಮಹಮ್ಮದ್ ಇಲಿಯಾಜ್, ಕೆ.ಪಿ. ಸುಶೀಲ್ ಕುಮಾರ್, ಕೀಳಘಟ್ಟ ನಂಜುಂಡಯ್ಯ, ಉಮೇಶ, ಶಿವಕುಮಾರ, ಕೊಟ್ಟಿಗೆ ಪುಟ್ಟಸ್ವಾಮಿ, ಅಂಬರೀಶ್, ಹೊಂಬಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.