ಮದ್ದೂರು: ಮನ್ಮುಲ್ಗೆ ಸೇರಿದ ಹಾಲು ಸರಬರಾಜು ಮಾಡುವ ಟ್ಯಾಂಕರ್ ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ಪರಿಣಾಮ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಒಕ್ಕೂಟದ ಮುಂದೆ ಕುಟುಂಬಸ್ಥರು ಹಾಗೂ ಗೆಜ್ಜಲಗೆರೆ ಗ್ರಾಮಸ್ಥರು ಶುಕ್ರವಾರ ಯುವಕನ ಶವವಿಟ್ಟು ಪ್ರತಿಭಟಿದರು.
ಗೆಜ್ಜಲಗೆರೆ ಗ್ರಾಮದ ವೀರೇಶ್ (24) ಮೃತ ಪಟ್ಟ ಯವಕ. ಇವರು ಬೈಕ್ ನಲ್ಲಿ ಸೆ.18ರಂದು ಮದ್ದೂರು– ಭಾರತೀನಗರ ರಸ್ತೆಯ ಕುದರಗುಂಡಿ ಕಾಲೊಮೀಪ ಸಮೀಪ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಮಳವಳ್ಳಿ ಕಡೆಯಿಂದ ಬಂದ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ಚಾಲಕನ ಅಜಾಗರೂಕತೆಯಿಂದ ಡಿಕ್ಕಿಯಾಗಿದೆ ಎಂದು ಆರೋಪಿಸಲಾಗಿತ್ತು.
ವೀರೇಶ್ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಮನ್ಮುಲ್ ಕಚೇರಿ ಮುಂದಕ್ಕೆ ಶವ ತಂದು ಪ್ರತಿಭಟನೆ ಗ್ರಾಮಸ್ಥರು ಪ್ರತಿಭಟಿಸಿದರು.
ಎಫ್.ಸಿ. ಹಾಗೂ ಇನ್ಶೂರೆನ್ಸ್ ಇಲ್ಲದ ಟ್ಯಾಂಕರ್ ಡಿಕ್ಕಿ ಹೊಡೆದು ಯುವಕನ ಜೀವ ತೆಗೆದಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಎಫ್.ಸಿ. ಮುಗಿದ ಎರಡು ವರ್ಷ ಕಳೆದಿದೆ ಇಷ್ಟಾದರೂ ಗಾಡಿಯನ್ನು ರಸ್ತೆಯಲ್ಲಿ ಓಡಿಸಿದ್ದುದು ಏಕೆ ಪ್ರಶ್ನಿಸಿದರು.
ಈ ಬಗ್ಗೆ ಮೃತ ವೀರೇಶ್ ಸಂಬಂಧಿ ಪುಟ್ಟೇಗೌಡ ಪ್ರತಿಭಟನಾ ಸಂದರ್ಭದಲ್ಲಿ ಮಾತನಾಡಿ ‘ನೆಪ ಮಾತ್ರಕ್ಕೆ ಮನ್ಮುಲ್ ಮಾನದಂಡ ಅನುಸರಿಸುತ್ತಿದೆ. ಹಳೆಯ ವಾಹನಗಳನ್ನು ರಸ್ತೆಗೆ ಬಿಟ್ಟು ಜನರ ಜೀವ ತೆಗೆಯುತ್ತಿದೆ. ಈ ಕೂಡಲೇ ಮೃತ ವೀರೇಶ್ ಕುಟುಂಬದ ಸದಸ್ಯರೊಬ್ಬರಿಗೆ ಒಕ್ಕೂಟದ ವತಿಯಿಂದ ಕೆಲಸ ನೀಡಬೇಕು ಹಾಗೂ ಸೂಕ್ತ ಪರಿಹಾರ ಕೊಡಬೇಕು. ಇಲ್ಲದಿದ್ದರೆ, ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಹಾಲು ಒಕ್ಕೂಟದ ಅಧ್ಯಕ್ಷ ರಾಮಚಂದ್ರು, ವ್ಯವಸ್ಥಾಪಕ ನಿರ್ದೇಶಕ ಮಹೇಶ್, ನಿರ್ದೇಶಕಿ ರೂಪ ಬಂದರು. ಮೃತ ವೀರೇಶ್ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ ನಂತರ ಕುಟುಂಬ ಸದಸ್ಯರಿಗೆ ಒಕ್ಕೂಟದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ, ಟ್ಯಾಂಕರ್ ಮಾಲೀಕನ ಕಡೆಯಿಂದ ₹ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ ನಂತರ ಪ್ರತಿಭಟನೆಯನ್ನು ಮೃತ ಕುಟುಂಬದವರು ಹಿಂಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.