ADVERTISEMENT

ರೈಸ್‌ಮಿಲ್‌ ಮೇಲೆ ದಾಳಿ: ಅನ್ನಭಾಗ್ಯ ಅಕ್ಕಿ, ರಾಗಿ ವಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 12:38 IST
Last Updated 19 ನವೆಂಬರ್ 2022, 12:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಡ್ಯ: ನಗರದ ಕಲ್ಲಹಳ್ಳಿಯಲ್ಲಿರುವ ಕಾಳೇಗೌಡ ರೈಸ್‌ಮಿಲ್‌ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳ ತಂಡ 120 ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿ, 140 ಕ್ವಿಂಟಲ್‌ ರಾಗಿ ಹಾಗೂ 3 ಕ್ಯಾಂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿ ಬಂದಿದೆ ಎಂಬ ಮಾಹಿತಿ ಆಧಾರದ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಮೂರು ವಾಹನಗಳಲ್ಲಿದ್ದ ಅಕ್ಕಿ, ರಾಗಿಯನ್ನು ರೈಸ್‌ಮಿಲ್‌ಗೆ ಇಳಿಸಲಾಗುತ್ತಿತ್ತು. ಇದಕ್ಕೂ ಮೊದಲು ಇನ್ನೊಂದು ವಾಹನ ಅಕ್ಕಿ ಇಳಿಸಿ ಬೆಂಗಳೂರಿನತ್ತ ಹೊರಟಿತ್ತು. ವಾಹನದ ಬೆನ್ನು ಹತ್ತಿದ ಪೊಲೀಸರು ಮದ್ದೂರು ಬಳಿ ವಶಕ್ಕೆ ಪಡೆದಿದ್ದಾರೆ.
‌‌
ಮೂರು ವಾಹನಗಳಲ್ಲಿ 1 ವಾಹನ ಆಹಾರ ಇಲಾಖೆಯ ವಾಹನವಾಗಿದ್ದು ಬೆಂಗಳೂರು ಬನಶಂಕರಿ ಟಿಎಪಿಸಿಎಂಎಸ್‌ಗೆ ಅನ್ನಭಾಗ್ಯ ಅಕ್ಕಿ ಕೊಂಡೊಯ್ಯಬೇಕಾಗಿತ್ತು. ಆದರೆ, ಅಕ್ಕಿಯ ಸ್ವಚ್ಛತೆ ಕೊರತೆ, ತೂಕದಲ್ಲಿ ವ್ಯತ್ಯಾಸ ಇದ್ದ ಕಾರಣ ತಿರಸ್ಕೃತಗೊಂಡಿತ್ತು. ಆ ಅಕ್ಕಿಯನ್ನು ರೈಸ್‌ ಮಿಲ್‌ನಲ್ಲಿ ಇಳಿಸಲಾಗುತ್ತಿತ್ತು.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕಾಳೇಗೌಡ ರೈಸ್‌ಮಿಲ್‌ ಮೇಲೆ ಮೊದಲೇ ಒಂದು ಬಾರಿ ದಾಳಿ ನಡೆಸಿ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆಯಲಾಗಿತ್ತು. ಮಜುಂ ಪಾಷಾ ಎನ್ನುವವರು 2021ರಲ್ಲಿ ಅಕ್ಕಿ ಗಿರಣಿಯನ್ನು ಬಾಡಿಗೆ ಪಡೆದು ನಡೆಸುತ್ತಿದ್ದರು.

ADVERTISEMENT

‘ಪರೀಕ್ಷೆಯ ನಂತರ ಅನ್ನಭಾಗ್ಯ, ರಾಗಿ ಎಂಬುದು ಖಾತ್ರಿಯಾಗಿದೆ. ಬಿಹಾರ ಮೂಲಕ ಕಾರ್ಮಿಕರು ಅಕ್ಕಿ, ರಾಗಿ ಇಳಿಸುತ್ತಿದ್ದರು. ಗುತ್ತಿಗೆ ಪಡೆದ ಮಾಲೀಕ ಪತ್ತೆಯಾಗಿಲ್ಲ. ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಎಂ.ಪಿ.ಕೃಷ್ಣ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.