ಮಳವಳ್ಳಿ: ‘ಕನ್ನಡವನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯವಾಗಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸುತ್ತಿರುವ ಕಂದಾಯ ನಿರೀಕ್ಷಕರ ಸೇವೆ ಅನನ್ಯ’ ಎಂದು ತಹಶೀಲ್ದಾರ್ ಎಸ್.ವಿ.ಲೋಕೇಶ್ ಶ್ಲಾಘಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಗಾಂಧಿ ಪುರಸ್ಕಾರ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡದ ಉಳಿವಿಗೆ ಶ್ರಮಿಸುವುದು ನಾಡಿನ ಜನರ ಕರ್ತವ್ಯವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಗಾಂಧೀಜಿ ಅವರ ಆದರ್ಶ ಪಾಲನೆಯಾಗಬೇಕಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿರುವ ಕಂದಾಯ ನಿರೀಕ್ಷಕರಿಗೆ ಗಾಂಧಿ ಪುರಸ್ಕಾರ ನೀಡಿ ಅಭಿನಂದಿಸುವ ಕಾರ್ಯ ಪ್ರಶಂಸನೀಯ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಚೇತನ್ ಕುಮಾರ್ ‘ಗಾಂಧಿ ಕಂಡ ಭಾರತ’ ವಿಷಯ ಕುರಿತು ಮಾತನಾಡಿದರು.
ಕಂದಾಯ ನಿರೀಕ್ಷಕರಾದ ಎಸ್.ಲಿಂಗಸ್ವಾಮಿ, ಚೇತನ್, ಪಿ.ಎಲ್.ಧರ್ಮೇಂದ್ರ, ಎಂ.ಪಿ.ರವಿಶಂಕರ್, ಎಂ.ಎಲ್.ಯೋಗೇಶ್, ಜಿ.ಎಸ್.ಶಿವಕುಮಾರ್, ರವಿಕುಮಾರ್, ಎಂ.ಜಿ.ಮಧುಸೂದನ್, ಮಂಜುನಾಥ್ ಹಾಗೂ ನಿವೃತ್ತ ಉಪ ತಹಶೀಲ್ದಾರ್ ಸೋಮಶೇಖರ್ ಸೇರಿದಂತೆ ಅನೇಕರಿಗೆ ಗಾಂಧಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ದಲಿತ ಕವಿ ಸಿದ್ದಲಿಂಗಯ್ಯ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹುರುಗಲವಾಡಿ ರಾಮಯ್ಯ, ಮುಖಂಡರಾದ ಮಾದೇಗೌಡ, ಎಚ್.ಮಲ್ಲಿಕಾರ್ಜುನಯ್ಯ, ಶಿವನಂಜು, ಎಂ.ಎನ್.ಜಯರಾಜು, ಮಂಜುನಾಥ್, ಶಿವಣ್ಣ, ಚುಂಚಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.