ಮದ್ದೂರು: ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಕೆಎಫ್ಸಿಎಸ್ಸಿ ಗೋದಾಮಿನ ಬೀಗ ಮುರಿದ ಕಳ್ಳರು ಸೋಮವಾರ ತಡರಾತ್ರಿ 47 ಕ್ವಿಂಟಲ್ ಅಕ್ಕಿಯನ್ನು ಕಳವು ಮಾಡಿದ್ದಾರೆ.
ಮಿನಿ ಲಾರಿಯೊಂದಿಗೆ ಬಂದ ದುಷ್ಕರ್ಮಿಗಳು ಗೋದಾಮಿನ ಒಳಗೆ ನುಗ್ಗಿ ಅಕ್ಕಿಯನ್ನು ಕಳವು ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಡಿತರವನ್ನು ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲು ಶೇಖರಣೆ ಮಾಡಿದ್ದರು. ಮಂಗಳವಾರ ಬೆಳಿಗ್ಗೆ ಅಧಿಕಾರಿಗಳು ಕಚೇರಿಗೆ ಬಂದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ಆಹಾರ ನಾಗರಿಕ ಸರಬರಾಜು ಜಂಟಿ ನಿರ್ದೇಶಕ ಎಂ.ಪಿ. ಕೃಷ್ಣಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಹಾಗೂ ಆಹಾರ ಇಲಾಖೆಯ ಶಿರಸ್ತೆದಾರ್ ಭೇಟಿ ನೀಡಿ ಪರಿಶೀಲಿಸಿದರು.
ಗೋದಾಮು ವ್ಯವಸ್ಥಾಪಕ ನಟರಾಜ್ ನೀಡಿದ ದೂರಿನ ಮೇರೆಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.