ಶ್ರೀರಂಗಪಟ್ಟಣ: ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಶನಿವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚು ಜನರು ಬಂದಿದ್ದ ಕಾರಣ ನೂಕು ನುಗ್ಗಲು ಉಂಟಾಯಿತು.
ಬೆಳಿಗ್ಗೆ 10.30ರ ಹೊತ್ತಿಗೆ 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ್ದರು. ಅವರನ್ನು ಸರದಿ ಸಾಲಿನಲ್ಲಿ ನಿಲ್ಲಿಸುವಲ್ಲಿ ಪೊಲೀಸರು ಹೈರಾಣಾದರು. ಜನ ದಟ್ಟಣೆಯನ್ನು ಕಂಡ ತಹಶೀಲ್ದಾರ್ ಎಂ.ವಿ.ರೂಪಾ ಟೋಕನ್ ವ್ಯವಸ್ಥೆ ಮಾಡುವಂತೆ ವೈದ್ಯರಿಗೆ ಸೂಚಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಕೆ. ವೆಂಕಟೇಶ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ. ಮಾರುತಿ ಅವರೇ ಜನರ ಬಳಿ ತೆರಳಿ
ಟೋಕನ್ ವಿತರಿಸಿದರು.
‘ಶನಿವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 240 ಮಂದಿಗೆ ಎರಡನೇ ಡೋನ್ ಲಸಿಕೆ ನೀಡಲಾಗಿದೆ. 200 ಮಂದಿಗೆ ಕೊವ್ಯಾಕ್ಸಿನ್ ಮತ್ತು 40 ಮಂದಿಗೆ ಕೋವಿಶೀಲ್ಡ್ ಲಸಿಕೆ ನೀಡಿದ್ದೇವೆ. ಸಂಜೆ ವೇಳೆಗೆ
ಕೋವ್ಯಾಕ್ಸಿನ್ ಮುಗಿದಿದ್ದು, ಕೋವಿಶೀಲ್ಡ್ ನ 30 ಲಸಿಕೆ ಮಾತ್ರ ಉಳಿದಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ ತಿಳಿಸಿದರು.
‘ಸದ್ಯಕ್ಕೆ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೋವಿಡ್ ಲಸಿಕೆ ಹಾಕುವಂತೆ ಸರ್ಕಾರದ ಸೂಚನೆ ಇದೆ. ಅದರಲ್ಲೂ ಶನಿವಾರ ಎರಡನೇ ಡೋಸ್ ಲಸಿಕೆ ಮಾತ್ರ ಹಾಕಲಾಗುತ್ತಿದೆ. ಲಸಿಕೆಯ ಲಭ್ಯತೆ ನೋಡಿಕೊಂಡು 45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಲಸಿಕೆ ಆರಂಭಿಸಲಾಗುತ್ತದೆ’ ಎಂದು ತಹಶೀಲ್ದಾರ್ ಎಂ.ವಿ. ರೂಪಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.