ಮಳವಳ್ಳಿ: ಪಟ್ಟಣದ ಶಾಂತಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಅಂಗಡಿಗಳ ಬೀಗ ಮುರಿದ ಕಳ್ಳರು ಹಣ ಕದ್ದೊಯ್ದಿರುವ ಘಟನೆ ಗ್ರಾಮಾಂತರ ಮತ್ತು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರತಡರಾತ್ರಿ ನಡೆದಿದೆ.
ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಾಂತಿ ಕಾಲೇಜಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಚೇರಿಯಲ್ಲಿದ್ದ ₹ 25 ಸಾವಿರ ನಗದು, ಚೆಕ್ ಬುಕ್ ಹಾಗೂ ಕೆಲ ದಾಖಲಾತಿಗಳನ್ನು ಕಳ್ಳತನ ಮಾಡಿದ್ದಾರೆ. ನಂತರ ಪಕ್ಕದಲ್ಲಿಯೇ ಇದ್ದ ಶಾಂತಿ ಸಮುದಾಯದ ಕಚೇರಿಯಲ್ಲೂ ₹ 20 ಸಾವಿರ ತೆಗೆದುಕೊಂಡು, ಬೀರುನಲ್ಲಿದ್ದ ದಾಖಲಾತಿಯನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎನ್ನಲಾಗಿದೆ.
ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯ ಸುಜುಕಿ ಬೈಕ್ ಶೋ ರೋಂನ ಕಿಟಕಿಯ ಸರಳನ್ನು ಬ್ಲೇಡ್ ನಿಂದ ಕತ್ತರಿಸಿ ಒಳಗೆ ನುಗ್ಗಿ ₹ 8 ಸಾವಿರ ನಗದು ಕಳವು ಮಾಡಿದ್ದು, ಕಿಟಕಿಯಿಂದ ಒಳ ನುಗ್ಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳು ಮುಸುಕು ಧರಿಸಿದ್ದಾರೆ. ಸುಲ್ತಾನ್ ರಸ್ತೆಯ ಸ್ವರಾಜ್ ಟ್ರಾಕ್ಟರ್ ಶೋ ರೋಂನಲ್ಲೂ ಕಳ್ಳತನ ವಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಎಂ.ಜೆ.ಪೃಥ್ವಿ, ಪಿಎಸ್ಐ ಡಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಎರಡು ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.