ಮಂಡ್ಯ: ‘ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕೊನೆಯಾಗಬೇಕು. ದೌರ್ಜನ್ಯದಿಂದ ಹೆಣ್ಣು ಮಕ್ಕಳನ್ನು ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯ ಆಗಬೇಕು’ ಎಂದು ಅನನ್ಯ ಹಾರ್ಟ್ ಸಂಸ್ಥೆಯ ಅಧ್ಯಕ್ಷೆ ಬಿ.ಎಸ್.ಅನುಪಮಾ ಹೇಳಿದರು.
ನಗರದ ಅರಕೇಶ್ವರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನೆಹರೂ ಯುವ ಕೇಂದ್ರ, ರೊಟರಿ ಮಂಡ್ಯ, ಜಾಗೃತಿ ಯುವತಿ ಮತ್ತು ಮಹಿಳಾ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಪ್ರತಿಯೊಬ್ಬ ನಾಗರಿಕ ಆಚರಿಸುವ ಮೂಲಕ ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು. ಪ್ರಸ್ತುತ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರು ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ನಾಗರಿಕ ಸಮಾಜ ತಲೆತಗ್ಗಿಸುವಂತಿವೆ. ಹಿಂದಿನ ಕಾಲದಿಂದಲೂ ಹೆಣ್ಣನ್ನು ಗೌರವದಿಂದ ನೋಡಿಕೊಂಡು ಬರಲಾಗುತ್ತಿದೆ, ಪೂಜ್ಯ ಸ್ಥಾನ ನೀಡಲಾಗಿದೆ. ಅದು ಮುಂದುವರಿಯಬೇಕು’ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ನಾರಾಯಣ್ ಮಾತನಾಡಿ ‘ಹೆಣ್ಣು ಮಕ್ಕಳನ್ನು ಪೂಜ್ಯನೀಯ ಭಾವನೆಯಿಂದ ನೋಡುತ್ತೇವೆ, ಆದರೆ ಆಕೆಗೆ ಅಧಿಕಾರ ಕೊಡುವಾಗ ಅದು ಪರುಷರಿಗೆ ಸಾಧ್ಯವಾಗುವುದೇ ಇಲ್ಲ. ದೊಡ್ಡಸ್ಥಾನಗಳಲ್ಲಿ ಹೆಣ್ಣು ಮಕ್ಕಳನ್ನು ನೋಡುವಂತಾಗಬೇಕು. ಹೆಣ್ಣಿಗೆ ಸಮಾನ ಹಕ್ಕು ಸಿಗದೇ ಇರುವುದು ದುರಂತ’ ಎಂದರು.
ಉಪಪ್ರಾಂಶುಪಾಲ ಲೋಕೇಶ್, ಉಪನ್ಯಾಸಕ, ಕವಿ ಕೆ.ಪಿ.ಮೃತ್ಯುಂಜಯ, ತಂಬಾಕು ನಿಯಂತ್ರಣ ಸಲಹೆಗಾರ ತಿಮ್ಮರಾಜು, ಮಕ್ಕಳ ರಕ್ಷಣಾ ಅಧಿಕಾರಿ ರಾಜು, ಸಾಮಾಜಿಕ ಕಾರ್ಯಕರ್ತ ಮೋಹನ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.