ಕಿಕ್ಕೇರಿ: ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರದಲ್ಲಿ ಒಂದಾದ ಸಾಸಲು ಗ್ರಾಮದಲ್ಲಿ ಏ.29ರಂದು ಜಾತ್ರೆ ನಡೆಯಲಿದೆ. ಆದರೆ, ಸೋಮೇಶ್ವರ ದೇವಸ್ಥಾನದ ಪುಷ್ಕರಣಿ ಬರಿದಾಗುತ್ತಿದೆ. ಆದರೆ, ನೀರು ತುಂಬಿಸಲು ಮುಜರಾಯಿ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ.
ಬಿಸಿಲಿನ ಬೇಗೆಯಿಂದಾಗಿ ಪುಷ್ಕರಣಿ ಬರಿದಾಗಿದೆ. ಸುಮಾರು 30 ಅಡಿ ಆಳದ ಕೊಳದಲ್ಲಿ ಸ್ವಲ್ಪ ನೀರಿದೆ. ಜಾತ್ರೆ ಸಂದರ್ಭದಲ್ಲಿ ಕೊಳದ ನೀರು ಸ್ವಲ್ಪ ಇಳಿಮುಖವಾದರೆ ಟ್ಯಾಂಕರ್ ನೀರು ತುಂಬಿಸಲಾಗುತ್ತಿತ್ತು.
ಜಾತ್ರೆಗೆ 3 ದಿನಗಳು ಬಾಕಿ ಇವೆ. ಭಕ್ತರು ವಿವಿಧ ಕಡೆಗಳಿಂದ ಬರುತ್ತಾರೆ. ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲ ದರ್ಶನಕ್ಕೂ ಮುನ್ನ ಇಲ್ಲಿನ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಹೋಗುವುದು ಸಂಪ್ರದಾಯ. ಸರ್ಪಸುತ್ತು, ಚರ್ಮದೋಷದಂತಹ ಕಾಯಿಲೆಗಳು ಗುಣಮುಖವಾಗಲಿದೆ ಎಂಬ ನಂಬಿಕೆ ಇದೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನದೆ ಸರ್ವಧರ್ಮದವರು ಸ್ನಾನ ಮಾಡುತ್ತಾರೆ. ಆದರೆ, ನೀರಿಲ್ಲದೆ ಭಕ್ತರಿಗೆ ತೊಂದರೆ ಆಗಲಿದೆ.
ಮುಜರಾಯಿ ಇಲಾಖೆ ಅಧಿಕಾರಿಗಳು ಕೂಡಲೇ ನೀರು ತುಂಬಿಸಬೇಕು. ಮೂಲಸೌಕರ್ಯ ಒದಗಿಸಬೇಕು ಎಂದು ಭಕ್ತ ಅನಂತ್ ಆಗ್ರಹಿಸಿದರು.
ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರ ಗಮನಕ್ಕೆ ತರಲಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಐಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.