ನಾಗಮಂಗಲ: ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಆ ಉದ್ಯೋಗ ತ್ಯಜಿಸಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ.
ತಾಲ್ಲೂಕಿನ ಕದಬಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಖರನಹಳ್ಳಿ ಗ್ರಾಮದ ಎಸ್.ಜೆ.ಪ್ರಮೋದ ಸಾಮಾನ್ಯ ವರ್ಗದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಶಿಖರನಹಳ್ಳಿ ಗ್ರಾಮದಲ್ಲಿ, ಪ್ರೌಢ ಶಿಕ್ಷಣವನ್ನು ಕದಬಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದ್ದರು. ಎಂಬಿಎ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿದ ಅವರು ಕಾಲೇಜಿನ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಇನ್ಫೋಸಿಸ್ ಕಂಪನಿಗೆ ಆಯ್ಕೆಯಾಗಿ ಎರಡು ವರ್ಷ ಅಲ್ಲಿ ಕಾರ್ಯನಿರ್ವಹಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಹಲವು ವರ್ಷಗಳಿಂದ ಕೆಲವೇ ವ್ಯಕ್ತಿಗಳು ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯುತ್ತಿದ್ದು, ಗ್ರಾಮದ ಅಭಿವೃದ್ಧಿ ಹಿಂದುಳಿದಿದೆ. ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಕಂಡಿರುವ ನನಗೆ ಚುನಾವಣೆಯಲ್ಲಿ ಗೆದ್ದು ಜನರ ಸೇವೆ ಮಾಡುವ ಹಂಬಲವಿದೆ. ಅಲ್ಲದೆ, ರಾಜಕೀಯಕ್ಕೆ ಪ್ರಜ್ಞಾವಂತ ವಿದ್ಯಾ ವಂತರ ಅವಶ್ಯಕತೆಯಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕಾಗಿದೆ ಎಂದು ಹೇಳಿದರು.
ಯುವಕರು ಮತ್ತು ವಿದ್ಯಾವಂತರು ಆಯ್ಕೆಯಾದರೆ ಗ್ರಾಮದ ಅಭಿ ವೃದ್ಧಿ, ಪಂಚಾಯಿತಿಯಿಂದ ಸಿಗುವ ಸವಲತ್ತುಗಳು ಸೇರಿದಂತೆ ವಿವಿಧ ಅನುಕೂಲಗಳನ್ನು ಅಗತ್ಯ ವಿರುವ ಜನರಿಗೆ ತಲುಪಿಸಲು ಸಹಾಯ ವಾಗುತ್ತದೆ. ವಿದ್ಯಾವಂತ ಯುವಕನೊಬ್ಬ ಗ್ರಾಮಕ್ಕಾಗಿ ಉದ್ಯೋಗ ತ್ಯಜಿಸಿ ಬಂದಿರುವುದು ಸಂತಸ ತಂದಿದೆ ಎಂದು ಶಿವಪ್ರಕಾಶ್ ಹೇಳಿದರು.
ಕೃಷ್ಣರಾಜ್, ನಾಗರಾಜು, ಮಹೇಶ್, ಆನಂದ್, ರಾಜೇಗೌಡ ಮತ್ತು ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.