ಶ್ರೀರಂಗಪಟ್ಟಣ: ಪಟ್ಟಣದ ಆನೆಕೋಟೆ ದ್ವಾರದ ಬಳಿ, ಕೋಟೆಗೆ ಹೊಂದಿಕೊಂಡಂತೆ ತಿಪ್ಪೆ ಗುಡ್ಡೆಗಳು ಕಣ್ಣಿಗೆ ರಾಚುತ್ತವೆ.
ಚೆಕ್ಪೋಸ್ಟ್ ಮೂಲಕ ಪಟ್ಟಣದ ಗೋಸೇಗೌಡರ ಬೀದಿಗೆ ನೇರ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ ಕಸವನ್ನು ತಂದು ಸುರಿಯಲಾಗಿದೆ.
ಸ್ಥಳೀಯರು ದನ, ಕುರಿ ಕೊಟ್ಟಿಗೆಗಳ ಗೊಬ್ಬರವನ್ನು ಕೋಟೆಗೆ ಹೊಂದಿಕೊಂಡ ಸ್ಥಳದಲ್ಲೇ ಸುರಿಯುತ್ತಿದ್ದಾರೆ. ಕಂದಕ, ಕೋಟೆ ಎರಡರ ಮಧ್ಯೆ ಹತ್ತಾರು ತಿಪ್ಪೆ ಗುಡ್ಡೆಗಳಿವೆ. ತಿಪ್ಪೆಗಳ ತ್ಯಾಜ್ಯ ರಸ್ತೆವರೆಗೂ ಚಾಚಿಕೊಂಡಿದೆ.
ಧ್ವನಿ ಮತ್ತು ಬೆಳಕು ಯೋಜನೆಯ ಸ್ಥಳದ ಪಕ್ಕದಲ್ಲೇ ಈ ಅವ್ಯವಸ್ಥೆ ಇದೆ. ಪಟ್ಟಣ ಪ್ರವೇಶಿಸುವವರಿಗೆ ಈ ಸಗಣಿ ಗುಡ್ಡೆಗಳ ದರ್ಶನವಾಗುತ್ತದೆ. ಮಳೆ ಸುರಿದರೆ ಈ ಗುಡ್ಡೆಗಳಿಂದ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ. ನಾಯಿಗಳು, ಹಂದಿಗಳು ಆಗಾಗ ಈ ತಿಪ್ಪೆಗಳನ್ನು ಕೆದಕಿ ಮತ್ತಷ್ಟು ಅವ್ಯವಸ್ಥೆ ಸೃಷ್ಟಿಸುತ್ತವೆ. ಕೋಟೆ, ಕಂದಕಗಳಲ್ಲಿ ಮರ ಗಿಡಗಳು ಹಬ್ಬಿ ನಿಂತು ಕೋಟೆಯನ್ನೇ ಮರೆ ಮಾಡುತ್ತಿರುವದು ಒಂದೆಡೆಯಾದರೆ, ಅಳಿದುಳಿದ ಕೋಟೆ ಸ್ಥಳ ತಿಪ್ಪು ಗುಂಡಿಯಾಗಿ ಮಾರ್ಪಡುತ್ತಿರುವುದು ಐತಿಹಾಸಿಕ ಪಟ್ಟಣದ ಒಟ್ಟಂದಕ್ಕೆ ಕಳಂಕವಾಗಿದೆ.
‘ಕೋಟೆ, ಕಂದಕಗಳ ಪಕ್ಕದಲ್ಲಿ ತಿಪ್ಪೆ ಹಾಕುವುದು ತಪ್ಪು. ಒಂದೆರಡು ದಿನದಲ್ಲಿ ಸ್ಥಳ ಪರಿಶೀಲನೆ ನಡೆಸಿ ಪುರಸಭೆ ಅಧಿಕಾರಿಗಳ ಜತೆಗೂಡಿ ತಿಪ್ಪೆಗಳನ್ನು ಎತ್ತಿಸಲಾಗುವುದು. ಸ್ಮಾರಕದ ಪಕ್ಕ ತಿಪ್ಪೆ ಹಾಕುವವರ ವಿರುದ್ಧ ಕ್ರಮ ಕೈಗಹೊಳ್ಳಲಾಗುವುದು’ ಎಂದು ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯುರೇಟರ್ ಎನ್.ಎಲ್. ಗೌಡ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.