ಶ್ರೀರಂಗಪಟ್ಟಣ: ಬೇಸಿಗೆ ಹಂಗಾಮಿನಲ್ಲಿ ಬೆಳೆದಿರುವ ಭತ್ತವನ್ನು ಕೇಳುವವರು ಇಲ್ಲದೆ ವಾರಗಟ್ಟಲೆ ಗದ್ದೆಯಲ್ಲೇ ಉಳಿಯುತ್ತಿದೆ.
ತಾಲ್ಲೂಕಿನ ಮರಳಾಗಾಲ, ಮಂಡ್ಯಕೊಪ್ಪಲು, ಚಿನ್ನಾಯಕನಹಳ್ಳಿ, ಗೆಂಡೆ ಹೊಸಹಳ್ಳಿ, ಮಣಿಗಗೌಡನಹುಂಡಿ, ಅರಕೆರೆ ಭಾಗಗಳಲ್ಲಿ ವಾರದ ಹಿಂದೆ ಕಟಾವು ಮಾಡಿರುವ ಭತ್ತವನ್ನು ರೈತರು ಜಮೀನಿನಲ್ಲೇ ಗುಡ್ಡೆ ಹಾಕಿದ್ದಾರೆ. ಏಳೆಂಟು ದಿನಗಳಿಂದ ಜಮೀನಿನಲ್ಲೇ ಇರುವುದರಿಂದ ಭತ್ತ ಮುಗ್ಗಲು ಹಿಡಿಯುತ್ತಿದೆ. ಭತ್ತದ ಬೆಳೆ ಕಟಾವು ಮಾಡಿದ ಯಂತ್ರದ ಬಾಡಿಗೆ ಕೊಡಲೂ ಕಾಸಿಲ್ಲದೆ ರೈತರು ಪರದಾಡುತ್ತಿದ್ದಾರೆ.
‘ಒಂದು ವಾರದ ಹಿಂದೆ ಭತ್ತ ಕಟಾವು ಮಾಡಿದ್ದು, ಮನೆಯಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಜಮೀನಿನಲ್ಲೇ ಮಾರಾಟ ಮಾಡಲು ಗುಡ್ಡೆ ಹಾಕಿದ್ದೇನೆ. ಆದರೆ ಭತ್ತ ಖರೀದಿಸಲು ಯಾರೂ ಬರುತ್ತಿಲ್ಲ. ಮಳೆ ಬಂದರೆ ಟಾರ್ಪಾಲ್ ಮುಚ್ಚುವುದು, ಬಿಸಿಲು ಬಂದರೆ ತೆಗೆದು ಒಣಗಿಸುವುದೇ ದಿನ ನಿತ್ಯದ ಕೆಲಸವಾಗಿದೆ. ನಾನು ಭತ್ತ ಬೆಳೆದು ಕೆಟ್ಟೆ’ ಎಂದು ದೊಡ್ಡಪಾಳ್ಯ ಗ್ರಾಮದ ಪಂಚಲಿಂಗು ಕಣ್ಣೀರು ಹಾಕಿದರು.
‘ಈ ಬಾರಿ ಭತ್ತಕ್ಕೆ ಬೆಲೆಯೂ ಇಲ್ಲ, ಬೇಡಿಕೆಯೂ ಇಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರತಿ ಕ್ವಿಂಟಲ್ಗೆ ₹400ರಷ್ಟು ಬೆಲೆ ಕಡಿಮೆಯಾಗಿದೆ. ಕಳೆದ ವರ್ಷ ಒಂದು ಕ್ವಿಂಟಲ್ ಭತ್ತಕ್ಕೆ ₹2100 ಇತ್ತು. ಈ ವರ್ಷ ₹1700ಕ್ಕೂ ಕೇಳುವವರು ಇಲ್ಲದಂತಾಗಿದೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ ಸಮಸ್ಯೆ ಬಿಚ್ಚಿಡುತ್ತಾರೆ.
ತಮಿಳುನಾಡು ಕಡೆಯಿಂದ ಬರುವ ದಳ್ಳಾಳಿಗಳು ಜ್ಯೋತಿ ಭತ್ತವನ್ನು ಮಾತ್ರ ಖರೀದಿಸುತ್ತಿದ್ದಾರೆ. ಎಂಟಿಯು–1001 ಹಾಗೂ ಇತರ ಸಣ್ಣ ತಳಿಯ ಭತ್ತ ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ’ಮರಳಾಗಾಲ ಕೃಷ್ಣೇಗೌಡ ರೈತ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ
ರೈತರ ಬದುಕು ಮೂರಾಬಟ್ಟೆ
‘ಸರ್ಕಾರ ಅಮ್ಯೂಸ್ಮೆಂಟ್ ಪಾರ್ಕ್ ಕಾವೇರಿ ಆರತಿ ಅಂತ ಹೊಟ್ಟೆ ತುಂಬಿಸದ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದೆ. ಆದರೆ ಅನ್ನ ಬೆಳೆಯುವ ರೈತರ ಕಷ್ಟ ಏನೆಂದು ಕೇಳುತ್ತಿಲ್ಲ. ಭತ್ತ ಕಟಾವು ಮಾಡಲು ಪ್ರತಿ ಗಂಟೆಗೆ ₹2500 ಬಾಡಿಗೆ ಕೊಡಬೇಕು. ನಾಟಿ ಗೊಬ್ಬರದ ಖರ್ಚು ಸೇರಿದರೆ ಪ್ರತಿ ಎಕರೆಯಲ್ಲಿ ಭತ್ತ ಬೆಳೆಯಲು ₹15000ದಿಂದ ₹20000ವರೆಗೆ ಖರ್ಚಾಗುತ್ತಿದೆ. ಸದ್ಯ ಖರ್ಚು ಕೂಡ ಸಿಗದೆ ರೈತರ ಬದುಕು ಮೂರಾಬಟ್ಟೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸುತ್ತಾರೆ. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ವರ್ಷ ಪೂರ್ತಿ ಭತ್ತ ಖರೀದಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.