ಶ್ರೀರಂಗಪಟ್ಟಣ: ಕೋವಿಡ್ ಲಸಿಕೆ ಹಾಕಿಸಿಕೊಂಡರೆ ತೊಂದರೆಯಾಗುತ್ತದೆ ಎಂಬ ಭಯದಿಂದ ಲಸಿಕೆ ಹಾಕಿಸಿಕೊಳ್ಳದೆ ತಪ್ಪಿಸಿಕೊಳ್ಳುತ್ತಿದ್ದವರನ್ನು ಪತ್ತೆ ಹಚ್ಚಿದ ಆರೋಗ್ಯ ಇಲಾಖೆ ಸಿಬ್ಬಂದಿ ಸೋಮವಾರ ಲಸಿಕೆ ಹಾಕಿದರು.
ಪಟ್ಟಣ ಸಮೀಪದ ಗಂಜಾಂನಲ್ಲಿ ಲಸಿಕೆ ಹಾಕಿಸಿಕೊಳ್ಳದ ಆಟೊ ಚಾಲಕರು ಇತರರಿಗೆ ಆರೋಗ್ಯ ಸುರಕ್ಷಣಾಧಿಕಾರಿ ಎಂ. ಮಹದೇವಮ್ಮ ನೇತೃತ್ವದ ತಂಡ ಮನವೊಲಿಸಿ ಲಸಿಕೆ ಹಾಕಿತು.
ಕೋವಿಡ್ ವಿರುದ್ಧದ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಈ ಲಸಿಕೆಯಿಂದ ತೊಂದರೆಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ಲಕ್ಷಾಂತರ ಮಂದಿ ಲಸಿಕೆ ಹಾಕಿಸಿಕೊಂಡಿದ್ದು, ಕೋವಿಡ್ನಿಂದ ರಕ್ಷಣೆ ಪಡೆದಿದ್ದಾರೆ ಎಂದು ಮಹದೇವಮ್ಮ ತಿಳಿಸಿದರು.
ಕಿರಿಯ ಆರೋಗ್ಯ ಸಹಾಯಕ ಚಂದನ್ ಮಾತನಾಡಿ, ವಾರದಲ್ಲಿ ಮೂರು ದಿನ ಲಸಿಕಾ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಇದುವರೆಗೆ ಒಂದೂ ಲಸಿಕೆ ಹಾಕಿಸಿಕೊಳ್ಳದ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯದವರನ್ನು ಗುರುತಿಸಿ ಲಸಿಕೆ ಹಾಕುತ್ತಿದ್ದೇವೆ. ಲಸಿಕೆ ಹಾಕಿಸಿಕೊಂಡವರು ಕೋವಿಡ್ ಸೋಂಕು ತಗುಲಿದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಷಯವನ್ನು ಜನರಿಗೆ ಮನವರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಜತೆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.