ADVERTISEMENT

ಉದ್ಘಾಟನೆಯಾಗದ ವಾಣಿಜ್ಯ ಕಟ್ಟಡ

ಬೆಸಗರಹಳ್ಳಿ ಸಂತೆ ಮೈದಾನ: ಅನೈತಿಕ ಚಟುವಟಿಕೆಗಳ ತಾಣ

ಬಿ.ಎ.ಮಧುಕುಮಾರ
Published 12 ಮಾರ್ಚ್ 2021, 2:43 IST
Last Updated 12 ಮಾರ್ಚ್ 2021, 2:43 IST
ಬೆಸಗರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂತೆ ಮೈದಾನದ ವಾಣಿಜ್ಯ ಕಟ್ಟಡಗಳು
ಬೆಸಗರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂತೆ ಮೈದಾನದ ವಾಣಿಜ್ಯ ಕಟ್ಟಡಗಳು   

ಕೊಪ್ಪ: ಬೆಸಗರಹಳ್ಳಿ ಗ್ರಾಮದಲ್ಲಿ ಮದ್ದೂರು ಎಪಿಎಂಸಿಯಿಂದ ₹ 75 ಲಕ್ಷ ವೆಚ್ಚದಲ್ಲಿ ಸಂತೆಯ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಒಂದೂವರೆ ವರ್ಷ ಕಳೆದರೂ ಉದ್ಘಾಟನೆಯಾಗಿಲ್ಲ. ಸಂತೆಯ ಕಟ್ಟಡಗಳನ್ನು ತಕ್ಷಣ ಉದ್ಘಾಟನೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ ಎಂದು ಬೆಸಗರಹಳ್ಳಿ ಗ್ರಾಮಸ್ಥರು ದೂರಿದ್ದಾರೆ.

ಪ್ರತಿ ಶನಿವಾರ ಬೆಸಗರಹಳ್ಳಿ ಗ್ರಾಮದಲ್ಲಿ ಸಂತೆ ನಡೆಯುತ್ತದೆ. ಸಂತೆ ಮೈದಾನದ ಕಟ್ಟಡಗಳು ನಿರ್ವಹಣೆಯ ಕೊರತೆಯ ಜತೆಗೆ ಜೂಜು ಅಡ್ಡೆ, ಮದ್ಯವ್ಯಸನಿಗಳ ತಾಣ, ನಿರಾಶ್ರಿತರ ತಂಗುದಾಣವಾಗಿ ಮಾರ್ಪಟ್ಟಿದೆ. ಕಿಡಿಗೇಡಿಗಳು ಮದ್ಯದ ಬಾಟಲಿಗಳನ್ನು ಒಡೆದು ಹಾಕಿದ್ದಾರೆ.

ADVERTISEMENT

ನೂತನ ವಾಣಿಜ್ಯ ಸಂಕೀರ್ಣದ ಸುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ಕಟ್ಟಡದ ಸಮೀಪ ಇರುವ ಚರಂಡಿಯಲ್ಲಿ ಹೂಳು ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ.

ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ನೆಪ ಹೇಳಿಕೊಂಡು ಸರ್ಕಾರದ ಆಸ್ತಿಯನ್ನುಪಾಳು ಕೊಂಪೆಯನ್ನಾಗಿ ಮಾಡುತ್ತಿದ್ದಾರೆ. ಬೆಸಗರಹಳ್ಳಿ ಸಾರಿಗೆ ಬಸ್ ನಿಲ್ದಾಣ ಬಳಿ ಬೀದಿ ಬದಿ ವ್ಯಾಪಾರಿಗಳು ತಳ್ಳುವ ಗಾಡಿಯಲ್ಲಿ ತರಕಾರಿ, ಸೊಪ್ಪು, ಹಣ್ಣು, ಹೂವು ಸೇರಿದಂತೆ ದಿನ ಬಳಕೆಯವಸ್ತುಗಳನ್ನು ಮಾರಾಟ ಮಾಡುತ್ತಿ ದ್ದಾರೆ. ಪ್ರತಿನಿತ್ಯ ಸಂತೆ ಕಟ್ಟಡಗಳಲ್ಲಿ ವ್ಯಾಪಾರ ವ್ಯವಹಾರ ಮಾಡಲು ಅನುವು ಮಾಡಿಕೊಡಬೇಕು. ಸಂತೆಯ ನೂತನ ಕಟ್ಟಡದಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಾಲಯ ಮತ್ತು ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕಿದೆ ಎನ್ನುತ್ತಾರೆ ಸ್ಥಳೀಯರಾದ ಪಣ್ಣೆದೊಡ್ಡಿ ವೆಂಕಟೇಶ್, ಬಿ.ಶ್ರೀನಿವಾಸ್, ಮರಲಿಂಗ.

ನಿರ್ವಹಣೆ ಕೊರತೆಯಿಂದ ಸಂತೆ ಮೈದಾನದ ಕಟ್ಟಡದ ಸಂಕೀರ್ಣದ ಬಳಿ ಅಶುಚಿತ್ವ ಮತ್ತು ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಗಮನಕ್ಕೆ ಬಂದಿದೆ. ಪೌರ ಕಾರ್ಮಿಕರಿಂದ ಆಗಾಗ ಶುಚಿ ಮಾಡಿಸಲಾಗುತ್ತಿದೆ. ಎಪಿಎಂಸಿಯಿಂದ ಗ್ರಾಮ ಪಂಚಾಯಿತಿಗೆ ಕಟ್ಟಡವನ್ನು ಹಸ್ತಾಂತರ ಮಾಡಿದರೆ ಸೂಕ್ತವಾಗಿ ನಿರ್ವಹಣೆ ಮಾಡಲಾಗುವುದು ಎನ್ನುತ್ತಾರೆ ಪಿಡಿಒ ಪ್ರಕಾಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.