ADVERTISEMENT

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ: ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 6:45 IST
Last Updated 25 ಮಾರ್ಚ್ 2011, 6:45 IST
ಅಭಿವೃದ್ಧಿಯಲ್ಲಿ ರಾಜಕೀಯ ಬೇಡ: ವೆಂಕಟೇಶ್
ಅಭಿವೃದ್ಧಿಯಲ್ಲಿ ರಾಜಕೀಯ ಬೇಡ: ವೆಂಕಟೇಶ್   

ಪಿರಿಯಾಪಟ್ಟಣ: ಅಭಿವೃದ್ದಿ ವಿಚಾರ ಬಂದಾಗ ರಾಜಕೀಯ ಮರೆತು ಎಲ್ಲರೂ ಒಟ್ಟಾಗಿ ಆಗಬೇಕಿರುವ ಕಾಮಗಾರಿ ಗಳನ್ನು ಪೂರ್ಣಗೊಳಿಸಲು ಸಹಕರಿಸ ಬೇಕು ಶಾಸಕ ಕೆ.ವೆಂಕಟೇಶ್ ತಿಳಿಸಿದರು. ತಾಲ್ಲೂಕಿನ ಹಲಗನಹಳ್ಳಿ ಗ್ರಾಮದಲ್ಲಿ 90ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಸ್ವಪ್ರತಿಷ್ಠೆಯನ್ನು ಬದಿಗೊತ್ತಿ ಗ್ರಾಮದ ಅಭಿವೃದ್ಧಿಯತ್ತ  ಗಮನಹರಿಸುವಂತೆ ಗ್ರಾಮಸ್ಥ ರಿಗೆ  ತಿಳಿಸಿದರು. ವೈಯಕ್ತಿಕ ಪ್ರತಿಷ್ಠೆಯಿಂದ ಯಾರಿಗೂ ಲಾಭವಿಲ್ಲ ಇದರಿಂದಾಗಿ ಮುಂದಿನ ಜನ ಸಾಮಾನ್ಯ ಜನರು ತೊಂದರೆಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜಕರಣಿಗಳು ಸಾಮಾನ್ಯ ಜನರೊಂದಿಗೆ ಹೊಂದಾಣಿಕೆಯಿಂದ ನಡೆದು ಕೊಳ್ಳಬೇಕು ಪಕ್ಷಭೇದ ಮರೆತು ಸಾರ್ವಜನಿಕರಿಗೆ ಆಗಬೇಕಾದ ಕೆಲಸಗಳ ಬಗ್ಗೆ ಕಾಳಜಿ ತೋರಬೇಕು ಎಂದರು.

ಪ್ರಸ್ತುತ ರಾಜಕಾರಣಗಳ ಬಗ್ಗೆ ಪ್ರಸ್ತಾಪಿಸಿದ ಅವರು ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ಬಡವರಿಗೆ ಒಂದು ಮನೆಯನ್ನು ಕಟ್ಟಿಸಿಕೊಟ್ಟಿಲ್ಲ ಬದಲಿಗೆ ಕೇವಲ ಪತ್ರಿಕಾ ಪ್ರಚಾರದಲ್ಲಿ ತೊಡಗಿದೆ. ದುಡ್ಡು ಮಾಡುವುದು ಅವರ ದಂದೆಯಾಗಿದ್ದು ಇಂತಹ ಭ್ರಷ್ಟ ಸರ್ಕಾರ ಹಿಂದೆಂದು ಬಂದಿಲ್ಲ ಮುಂದೆ ಬರುವುದು ಇಲ್ಲ ಎಂದು ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು. ಪಿರಿಯಾಪಟ್ಟಣ ಬೆಟ್ಟದಪುರ ರಸ್ತೆ ಹಾಳಾಗಿದ್ದು ರಸ್ತೆ ನಿರ್ಮಾಣಕ್ಕೆ ಸರ್ಕಾರವನ್ನು ಕೇಳಿ ಕೇಳಿ ಸಾಕಾಗಿದೆ. ವಿರೋಧ ಪಕ್ಷದವರನ್ನು ಶತ್ರು ರಾಷ್ಟ್ರದಿಂದ ಬಂದವರಂತೆ ಕಾಣುತ್ತಾರೆ. ಇದು ಹೀಗೆ ಮುಂದುವರೆದರೆ ನಾವು ನೀವು ಸೇರಿ ರಸ್ತೆಯಲ್ಲಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲ್ಲೂಕಿನ ಕೆ.ಬಸವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ, ಕಣಗಾಲು, ಮನುಗನಹಳ್ಳಿ ಗ್ರಾಮ ಪರಿಮಿತಿ ರಸ್ತೆ  ಕಾಮಗಾರಿ, ದೊಡ್ಡ ಕಮರವಳ್ಳಿ ದೇವಸ್ಥಾನ ರಸ್ತೆ ಕಾಮಗಾರಿ, ಚನ್ನಕಾವಲು ಗ್ರಾಮ ರಸ್ತೆ ಪರಿಮಿತಿ ರಸ್ತೆ ಕಾಮಗಾರಿಗೆ ಮತ್ತು  ಸ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರ ಕೊಠಡಿ, ದೊಡ್ಡಹರವೆ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಮತ್ತು ಗ್ರಾಮದ ಕಾಲೋನಿ ರಸ್ತೆ ಕಾಮಗಾರಿಗೆ, ದೊಡ್ಡಹೊನ್ನೂರು ಕಾವಲ್ ರಸ್ತೆ ಮತ್ತು ಸ.ಪ್ರಾ.ಶಾಲೆಗಳ ಕಟ್ಟಡದ ಕಾಮಗಾರಿಗೆ, ಮಂಚದೇವನಹಳ್ಳಿ ಅಂಗನವಾಡಿ ಕಟ್ಟಡ, ಮತ್ತು ಕುಡಿ ಯುವ ನೀರಿನ ಯೋಜನೆಗಳಿಗೆ ಗುದ್ದಲಿ ಪೂಜೆ ನೆರ ವೇರಿಸಿದರು. ದೊಡ್ಡಹರವೆ ಗ್ರಾಮದ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿದರು.

ಜಿ.ಪಂ.ವಿರೋಧ ಪಕ್ಷದ ನಾಯಕಿ ಮಂಜುಳರಾಜ್, ಜಿ.ಪಂ.ಸದಸ್ಯೆ ಕಾವೇರಿಶೇಖರ್, ತಾ.ಪಂ.ಅಧ್ಯಕ್ಷ ಜವರಪ್ಪ, ತಾ.ಪಂ.ಸದಸ್ಯರಾದ ಅತ್ತರ್ ಮತೀನ್, ಕೊಪ್ಪ ಮಹ ದೇವ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಹೊಲದಪ್ಪ, ಇಓ ಟಿಎನ್ ಮೂರ್ತಿ, ಬಿಇಓ ಜಿ.ಎ.ಲೋಕೇಶ್, ಎಇಇ ಶಶಿಧರ್, ಸಿಡಿಪಿಓ ಮದ್ದಾನ್ ಸ್ವಾಮಿ, ಮುಖಂಡರಾದ ನೀಲಂಗಾಲ ಜಯಣ್ಣ, ವಾಹಿದ್ ಪಾಷ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.