ADVERTISEMENT

ಆದಿವಾಸಿ ಮುಖಂಡರಿಂದ ಪರಿಶೀಲನೆ, ತರಾಟೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 8:57 IST
Last Updated 29 ಅಕ್ಟೋಬರ್ 2017, 8:57 IST

ಎಚ್.ಡಿ.ಕೋಟೆ: ತಾಲ್ಲೂಕಿನ ಭೀಮನಹಳ್ಳಿ ಸಮೀಪದ ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆ ಆದಿವಾಸಿ ಮುಖಂಡರು ಶನಿವಾರ ಭೇಟಿ ನೀಡಿ ನಿರ್ಮಾಣ ಹಂತದ ಮನೆಗಳು ಮತ್ತು ಜಾಗ ಪರಿಶೀಲನೆ ನಡೆಸಿದರು. ನಾಗರಹೊಳೆ ಉದ್ಯಾನದಿಂದ ಸ್ಥಳಾಂತರಗೊಂಡ ಆದಿವಾಸಿಗಳಿಗೆ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸುತ್ತಿರುವ ಮನೆಗಳು ತೀವ್ರ ಕಳಪೆಯಿಂದ ಕೂಡಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಗುರುವಾರ ವರದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತ ಆದಿವಾಸಿ ಮುಖಂಡರು ಸ್ಥಳ ಪರಿಶೀಲನೆ ನಡೆಸಿದರು.

ಕರ್ನಾಟಕ ಮೂಲ ನಿವಾಸಿಗಳ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಆದಿವಾಸಿಗಳ ಪುನರ್ವಸತಿಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಹಣ ಕಡಿತಗೊಳಿಸಬಾರದು. ಅವರ ಅಭಿವೃದ್ಧಿಗೆ ಸಂಪೂರ್ಣ ಹಣ ಮೀಸಲಿಡಬೇಕು. ಉಚಿತವಾಗಿ ನೀಡುವ ಭೂಮಿಗೆ ಪುನರ್ವಸತಿಯ ಹಣ ಕಡಿತಗೊಳಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.0

ಪುನರ್ವಸತಿಯ ₹ 15 ಲಕ್ಷ ಹಣದಲ್ಲಿ 3 ಎಕರೆ ಭೂಮಿಗೆ ₹ 6.9 ಲಕ್ಷ ಪಡೆಯುತ್ತೀರಾ, ಕಳಪೆ ಮನೆ ನಿರ್ಮಿಸಿ ₹ 4.65 ಲಕ್ಷ ಲೆಕ್ಕ ಕೊಡುತ್ತೀರಾ, 3 ಚದರದ ಒಂದು ಮನೆಯ ವಿದ್ಯುತ್ ಸಂಪರ್ಕಕ್ಕೆ ₹ 75 ಸಾವಿರ ಏಕೆ, ಗೋಡೆ ಮೇಲೆ ವಿದ್ಯುತ್ ವೈರಿಂಗ್ ಪೈಪ್ ಅಳವಡಿಸುತ್ತಿರುವುದು ತೀರ ಕಳಪೆಯಾಗಿದೆ, ಬೀದಿ ದೀಪಕ್ಕಾಗಿ ಪರಿಹಾರದ ಹಣ ಬಳಕೆ ತಪ್ಪು, ಬೇಕಾಬಿಟ್ಟಿ ಲೆಕ್ಕ ತೋರಿಸಿ ಆದಿವಾಸಿಗಳಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ADVERTISEMENT

ಮೂಲಸೌಕರ್ಯ ಒಳಗೊಂಡ ನಿವೇಶನದಲ್ಲಿ ಮನೆ ನಿರ್ಮಿಸುವ ಬದಲು ಹಳ್ಳದಿಣ್ಣೆಯಲ್ಲಿಯೇ ಕಟ್ಟುತ್ತಿರುವುದರಿಂದ ಮನೆಗಳಿಗೆ ನೀರು ನುಗ್ಗುತ್ತದೆ. ರಸ್ತೆ ನಿರ್ಮಾಣಕ್ಕೂ ಮೊದಲೇ ಮನೆ ನಿರ್ಮಿಸುತ್ತಿರುವುದು ಅವೈಜ್ಞಾನಿಕ ಕಾಮಗಾರಿ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಯುಜಿಡಿ ಮಾಡಿ ಶೌಚಾಲಯ ನಿರ್ಮಿಸುವುದು ಸೂಕ್ತ. ಈಗ ಕಟ್ಟುತ್ತಿರುವ ಶೌಚಾಲಯ ಕೆಲವು ವರ್ಷಗಳಷ್ಟೆ ಬಾಳಿಕೆ ಬರುತ್ತವೆ, ನಂತರ ಬಳಕೆಗೆ ಬರುವುಯದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಭೂಮಿ ಅಭಿವೃದ್ಧಿ ಪಡಿಸಿಲ್ಲ. ಬೇಸಾಯ ಮಾಡಲು ಬೇಕಾಗುವ ಯಾವುದೇ ಯೋಜನೆ ಇಲ್ಲಿ ಮಾಡುತ್ತಿಲ್ಲ. ಇದರಿಂದ ಕಾಡು ಬಿಟ್ಟು ಬರುವ ಆದಿವಾಸಿಗಳಿಗೆ ಅನ್ಯಾಯವಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.