ADVERTISEMENT

ಆ.ನೇ.ಉಪಾಧ್ಯೇ ಬದುಕು ಅನುಕರಣನೀಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 11:50 IST
Last Updated 28 ಜನವರಿ 2012, 11:50 IST

ಮೈಸೂರು: ಕನ್ನಡ ಸಾಹಿತ್ಯದ ಕೆಲವು ವಿದ್ವಾಂಸರಲ್ಲಿ ಸರಳ ಜೀವಿಯಾಗಿ ಅ.ನೇ. ಉಪಾಧ್ಯೇ ಅವರ ಬದುಕು ನಮಗೆ ಮತ್ತು ಮುಂದಿನ ತಲೆಮಾರಿಗೂ ಅನುಕರಣನೀಯ ಎಂದು ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ ಅಧ್ಯಕ್ಷ ನ್ಯಾ.ಅಜಿತ್ ಸಿ.ಕಬಿನ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೊ.ಹಂಪ ನಾಗರಾಜಯ್ಯ ಅವರ `ಆ.ನೇ. ಉಪಾಧ್ಯೇ ಅವರ ಕನ್ನಡ ವಾಙ್ಮಯ~ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇವರು ಬೆಳಸಿಕೊಂಡಿದ್ದ ಕನ್ನಡಭಿ ಮಾನ, ಕನ್ನಡದ ಸಂಸ್ಕೃತಿ, ಗೌರವವನ್ನು ಜೀವನದ ಕೊನೆಯವರೆಗೂ ಬಿಟ್ಟು ಕೊಡಲಿಲ್ಲ. ಅವರ ಸಮಯಪಾಲನೆ ಮತ್ತು ಜೀವನದಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ. ನಮ್ಮಂತಹ ನ್ಯಾಯಮೂರ್ತಿಗಳಿಗೆ ಸ್ಥಾನದಿಂದ ಮಾನ್ಯತೆ ಸಿಕ್ಕಿದರೆ ಇಂತಹ ಮಹಾನ್ ವಿದ್ವಾಂಸರಿಗೆ ಜ್ಞಾನದಿಂದ ಮಾನ್ಯತೆ ಸಿಗುತ್ತದೆ ಎಂದು ಹೇಳಿದರು.

ಪುಸ್ತಕ ಕುರಿತು ಮಾತನಾಡಿದ ಸಾಹಿತಿ ಪ್ರೊ.ಟಿ.ವಿ. ವೆಂಕಟಾಚಲಶಾಸ್ತ್ರಿ ಕನ್ನಡದ ಎರಡು ಐರಾವತಗಳಲ್ಲಿ ಒಬ್ಬರಾದ ಉಪಾಧ್ಯೇ ಪ್ರಾಕೃತ ಸಾಹಿತ್ಯ ಪ್ರಾಚೀನ ಗ್ರಂಥಗಳ ರಚನೆಯಲ್ಲಿ ಅದ್ವಿತೀಯರು ಎಂದು ಬಣ್ಣಿಸಿದರು.

ಮಹಾಮಾನವ ಹಾಗೂ ಪೂಜ್ಯರಾದ ಉಪಾಧ್ಯೇ ಅವರನ್ನು ಕುರಿತು ಕೃತಿ ರಚಿಸಿರುವ ಹಂಪನಾ ಉತ್ತಮವಾದ ಕೆಲಸ ಮಾಡಿದ್ದಾರೆ. ಒಳ್ಳೆಯ ಲೇಖನಗಳ ಸಂಗ್ರಹ ಮಹಾಪುರಾಣದ ಕೈಪಿಡಿಗಳು ಈ ಕೃತಿಯಲ್ಲಿವೆ. ಆದರೆ ಕೆಲವು ಮುಖ್ಯವಾದ ಬರಹಗಳು ಮತ್ತು ಇಂಗ್ಲಿಷ್ ಅನುವಾದಗಳನ್ನು ಕೈ ಬಿಟ್ಟಿದ್ದಾರೆ. ಒಟ್ಟಾರೆ ಉಪಾಧ್ಯೇ ದೊಡ್ಡಪರ್ವತ. ಈ ಕುರಿತು ಗ್ರಂಥ ರಚಿಸಿರುವ ಹಂಪನಾ ಅವರ ಕೆಲಸ ಶ್ಲಾಘನೀಯ ಎಂದರು.

ಹಂಪ ನಾಗರಾಜಯ್ಯ ಅವರನ್ನು ಜಿಲ್ಲಾ ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಇತಿಹಾಸ ತಜ್ಞ ಡಾ.ಕೆ.ವಿ. ರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕಾರ್ಯದರ್ಶಿ ಸಿ.ಎನ್. ಚಂದ್ರಶೇಖರ್, ರಂಗಕರ್ಮಿ ರಾಜಶೇಖರ್ ಕದಂಬ, ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ವಿದ್ಯಾಸಾಗರ್ ಕದಂಬ ಇತರರು ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.