ADVERTISEMENT

ಎಚ್.ಡಿ.ಕೋಟೆ: ಭೀಮನಹಳ್ಳಿಯಲ್ಲಿ ಸೆರೆಸಿಕ್ಕ ಚಿರತೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 7:55 IST
Last Updated 19 ಫೆಬ್ರುವರಿ 2012, 7:55 IST

ಎಚ್.ಡಿ.ಕೋಟೆ: ರೈತನ ಮೇಲೆ ದಾಳಿ ಮಾಡಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಾಲ್ಲೂಕಿನ ಭೀಮನಹಳ್ಳಿ ಸಮೀಪ ಶನಿವಾರ ಸೆರೆ ಹಿಡಿದಿದ್ದಾರೆ.

 ಭೀಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಷ್ಕೆರೆ ಸಮೀಪದ ವಿಶ್ವಕರ್ಮ ಕಾಲೋನಿಯ ರೈತ (ಅಂಗವಿಕಲ) ತೊಟ್ಲೆಗೌಡ ಎಂಬಾತನಿಗೆ ಶನಿವಾರ ದಾಳಿ ನಡೆಸಿತು. ತೋಟ್ಲೆಗೌಡ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಿಗ್ಗೆ 10ಗಂಟೆಯಲ್ಲಿ ನಿತ್ಯ ಕರ್ಮ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ತೊಟ್ಲೆಗೌಡನ ಮೇಲೆ ಏಕಾಏಕಿ ಚಿರತೆ ದಾಳಿ ನಡೆಸಿತು. ಇದರಿಂದ ಗಾಬರಿಗೊಂಡ ತೋಟ್ಲೆಗೌಡ ಕೈಯಲ್ಲಿದ್ದ ದೊಣ್ಣೆಯಿಂದ ಹೊಡೆದು ಪ್ರಾಣಾಪಾಯದಿಂದ ಪಾರಾಗಿ ಚೀರಾಡಿದ್ದು, ಅಕ್ಕ ಪಕ್ಕದಲ್ಲಿದ್ದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಪಕ್ಕದಲ್ಲಿಯೇ ಇದ್ದ ಹುಲ್ಲಿನ ಮೆದೆಯೊಳಗೆ ಸೇರಿಕೊಂಡಿತು.

 ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಲೆಯ ಮೂಲಕ ಚಿರತೆಯನ್ನು ಸೆರೆಹಿಡಿದರು. ಅರಣ್ಯ ಇಲಾಖೆಯ ಪಶುವೈದ್ಯ  ರಮೇಶ್ ಅರವಳಿಕೆ ಚುಚ್ಚುಮದ್ದು ನೀಡಿದರು. ನಂತರ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕೈಮರದ ಸಮೀಪ ಕಾಡಿಗೆ ಬಿಡಲಾಯಿತು.

ಕಾರ್ಯಾಚರಣೆಯಲ್ಲಿ ಎಚ್.ಡಿ.ಕೋಟೆ ವಲಯ ಅರಣ್ಯಾಧಿಕಾರಿ ಮೋಹನ್‌ಕುಮಾರ್, ಹುಣಸೂರು ವಲಯ ಅರಣ್ಯಾಧಿಕಾರಿ ರಾಧಕೃಷ್ಣ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.