ಎಚ್.ಡಿ.ಕೋಟೆ: ತಾಲ್ಲೂಕಿನ ಮೇಟಿಕುಪ್ಪೆ ಮತ್ತು ಅಗಸನಹುಂಡಿ ಸಮೀಪದ ಕಾಡಂಚಿನ ಆನೆ ಕಂದಕದಲ್ಲಿ ಬಿದ್ದಿದ್ದ ಗರ್ಭಿಣಿ ಆನೆಯನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಗುರುವಾರ ಯಶಸ್ವಿಯಾದರು.
ಬುಧವಾರ ರಾತ್ರಿ ಏಳೆಂಟು ಆನೆಗಳು ಕಾಡಂಚಿನ ಗ್ರಾಮಗಳಲ್ಲಿ ಬೆಳೆದಿದ್ದ ರಾಗಿ, ಜೋಳ ಸೇರಿದಂತೆ ಇನ್ನಿತರೆ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿದವು. ನಂತರ ಕಾಡಿಗೆ ತೆರಳುವಾಗ ಗರ್ಭಿಣಿ ಆನೆ ಕಂದಕದಲ್ಲಿ ಸಿಲುಕಿಕೊಂಡು ಮೇಲೇಳು ಸಾಧ್ಯವಾಗದೆ ನರಳುತ್ತಿತ್ತು. ಇದನ್ನು ಗಮನಿಸಿದ ಗಾರ್ಡ್ ವೆಂಕಟೇಶ್, ಮೇಟಿಕುಪ್ಪೆ ಅರಣ್ಯ ವಲಯಾಧಿಕಾರಿ ಪೂವಯ್ಯನವರ ಮಾರ್ಗದರ್ಶನದಲ್ಲಿ ಪಟಾಕಿ ಸಿಡಿಸಿ ಕಾಡಿಗೆ ಅಟ್ಟಲು ಯಶಸ್ವಿಯಾದರು.
ಕಾರ್ಯಾಚರಣೆಯಲ್ಲಿ ಮಲ್ಲಿಕಾರ್ಜುನ, ಮಂಜು, ಸಿದ್ದಾರೂಡ, ಶ್ರೀನಿವಾಸ್, ಸಾಕಯ್ಯ, ಮಂಜುನಾಥ್ ಮತ್ತು ನಂಜುಂಡಸ್ವಾಮಿ ಇದ್ದರು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.