ಮೈಸೂರು: ಇಲ್ಲಿ ನವೀನ ತಂತ್ರ ಜ್ಞಾನ ಹಾಗೂ ಪರಿಕಲ್ಪನೆಗಳು ಗಮನ ಸೆಳೆದವು. ರೈತರಿಗೆ ಅನುಕೂಲವಾಗುವ, ಜನಸಾಮಾನ್ಯರಿಗೆ ನಿತ್ಯಜೀವನ ಸರಾಗಗೊಳಿಸುವ ಮಾದರಿಗಳು ಆಕರ್ಷಿಸಿದವು.
ಜಯಚಾಮರಾಜೇಂದ್ರ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಭಾರತೀಯ ಗುಣವೃತ್ತ ವೇದಿಕೆ ಹಮ್ಮಿಕೊಂಡಿರುವ ನಾಲ್ಕು ದಿನಗಳ ವಿಚಾರ ಸಂಕಿರಣದ ಪ್ರದರ್ಶನದಲ್ಲಿ ಹಲವು ಉತ್ಸಾಹಿ ತಂತ್ರಜ್ಞರು ತಮ್ಮ ಆವಿಷ್ಕಾರ ಪ್ರದರ್ಶಿಸಿದರು. ಮಿಕ್ಸರ್ ಗ್ರೈಂಡರ್ ಇರುವ ಬೈಸಿಕಲ್, ಗದ್ದೆಗಳಲ್ಲಿ ಹಕ್ಕಿಗಳನ್ನು ಓಡಿಸುವ ಫ್ಯಾನ್ ಕುತೂಹಲ ಮೂಡಿಸಿದವು.
ಟಿವಿಎಸ್ ಮೋಟಾರ್ ಕಂಪೆನಿಯ ಕಿರಿಯ ಎಂಜಿನಿಯರ್ ಕೆ.ಸುಧೀರ್ ಅವರು ತಯಾರಿಸಿರುವ ಸೈಕಲಿನಲ್ಲಿ ಮಿಕ್ಸರ್ ಗ್ರೈಂಡರ್ ಅನ್ನು ಚಕ್ರಕ್ಕೆ ಜೋಡಿಸಲಾಗಿದೆ. ಸೈಕಲ್ ತುಳಿಯುತ್ತಲೇ, ಚಟ್ನಿ, ಹಣ್ಣಿನ ರಸ, ಸಾರಿನ ಮಸಾಲೆ ಅರೆದುಕೊಳ್ಳಬಹುದು. ಇದಕ್ಕೆ ವಿದ್ಯುತ್ ಅಗತ್ಯವೇ ಇಲ್ಲ ಎಂಬುದು ವಿಶೇಷ.
ಅಂತೆಯೇ, ಎಚ್.ಜಿ.ಶಿವಕುಮಾರ ಸ್ವಾಮಿ ತಯಾರಿಸಿರುವ ಕೃಷಿ ಉಪಕರಣ ವಿನೂತನವಾಗಿದೆ. ದೊಡ್ಡ ತಗಡಿನ ಡಬ್ಬಿಯೊಳಗೆ ಕಲ್ಲುಗಳನ್ನು ಹಾಕಿ, ಅದಕ್ಕೆ ರೆಕ್ಕೆಗಳನ್ನು ಜೋಡಿಸಲಾಗಿದೆ. ಗಾಳಿ ಬೀಸಿದಾಗ ರೆಕ್ಕೆಗಳು ತಿರುಗಿ ಕಲ್ಲುಗಳು ಸದ್ದುಂಟು ಮಾಡುತ್ತವೆ. ಇದರಿಂದ ಹಕ್ಕಿಗಳು ಬೆದರಿ ಹಾರಿಹೋಗುತ್ತವೆ. ರೈತಪ್ರಿಯವಾದ ಈ ತಂತ್ರಜ್ಞಾನಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಪ್ರದರ್ಶನದಲ್ಲಿದ್ದ ಹತ್ತಾರು ಹೊಸ ಚಿಂತನೆಯ ವೈಜ್ಞಾನಿಕ ಮಾದರಿಗಳು ಪ್ರಶಂಸೆಗೆ ಪಾತ್ರವಾದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.