ADVERTISEMENT

ಗ್ರಾಮೀಣ ಪ್ರತಿಭೆಗೆ ಹೊಳಪು!

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:18 IST
Last Updated 21 ಡಿಸೆಂಬರ್ 2013, 9:18 IST

ತಿ.ನರಸೀಪುರ: ಪಟ್ಟಣದ ವಿದ್ಯೋದಯ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿಯು ಗ್ರಾಮೀಣ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಯಿತು.


ಕ್ಲಸ್ಟರ್‌ ಮಟ್ಟದ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.
ಜೇಡಿಮಣ್ಣಿನಿಂದ ಬಸವನ ವಿಗ್ರಹ, ನವಿಲು, ಮೊಸಳೆಯೊಂದು ಹಾವು ತಿನ್ನುತ್ತಿರುವುದು, ನವಿಲಿನ ನರ್ತನ, ಆಮೆ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚಿಸಿ ತಮ್ಮೊಳಗಿನ ಕಲೆ ಪ್ರದರ್ಶನ ಮಾಡಿದರು.

ಮತ್ತೊಂದೆಡೆ ಕೋಲಾಟ, ವೀರಗಾಸೆ ಕುಣಿತ, ಜಾನಪದ ಶೈಲಿನ ಸಾಮೂಹಿಕ ನೃತ್ಯ ಪ್ರದರ್ಶನ ನಡೆಯಿತು. ರಂಗೋಲಿಗೆ ವಿವಿಧ ಬಣ್ಣ ಹಚ್ಚಿ ಸುಂದರ ಚಿತ್ತಾರಗಳನ್ನು ಮೂಡಿಸಿದರು. ಕುಂಚ ಹಿಡಿದು ವಿದ್ಯಾರ್ಥಿಗಳು ಚಿತ್ರ ಬಿಡಿಸಿದರು. ಸಂದೇಶ ನೀಡುವ ಹಾಗೂ ಹಾಸ್ಯ ಮನೋಭಾವದ ವಿವಿಧ  ನಾಟಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಶಿಕ್ಷಣ ಸಂಯೋಜಕ ಎಚ್‌.ಎಂ. ಶಂಕರ್‌, ಪ್ರಕಾಶ್‌  ವಿದ್ಯೋದಯ ಶಿಕ್ಷಣ ಸಂಸ್ಥೆಗಳ ಮುಖ್ಯ ಶಿಕ್ಷಕರಾದ ಬಿ.ಸಿ. ಇಂದಿರಮ್ಮ, ಟಿ.ಪಿ. ವಿಶ್ವನಾಥ್‌ ಸೇರಿದಂತೆ ತಾಲ್ಲೂಕಿನಿಂದ ಆಗಮಿಸಿದ್ದ ವಿವಿಧ ಶಾಲಾ ಮುಖ್ಯ ಶಿಕ್ಷಕರು, ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT