ADVERTISEMENT

ಚಿಕ್ಕಮ್ಮಗೆ ಸೋಲು: ಮಗಳಿಗೆ ವಿಜಯಮಾಲೆ!

ಸಾಲಿಗ್ರಾಮ ಗ್ರಾಮಪಂಚಾಯಿತಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 6:23 IST
Last Updated 22 ಡಿಸೆಂಬರ್ 2012, 6:23 IST

ಸಾಲಿಗ್ರಾಮ: ಚಿಕ್ಕಮ್ಮ ಹಾಗೂ ಮಗಳ ನಡುವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಜಿದ್ದಾಜಿದ್ದಿನ ರಾಜಕೀಯ ಸೆಣಸಾಟದಲ್ಲಿ ಮಗಳ ಕೊರಳಿಗೆ ವಿಜಯದ ಮಾಲೆ ಬೀಳುವ ಮೂಲಕ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ತೆರೆಮರೆಯ ರಾಜಕೀಯಕ್ಕೆ ತೆರೆ ಬಿದ್ದಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟ ಮಾಡಿದ ದಿನದಿಂದ ಸಾಲಿಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರ ನಡುವೆ ಉಂಟಾದ ತೆರೆಮರೆಯ ರಾಜಕೀಯ ಗುದ್ದಾಟ, ಆರಂಭದಲ್ಲಿ ಚುರುಕುಗೊಂಡಿರಲಿಲ್ಲ. ಆದರೆ, ಶಾಸಕ ಸಾ.ರಾ.ಮಹೇಶ್ ಸಹೋದರ ಸಾ.ರಾ.ನಂದೀಶ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ರಾಣಿ ರಾಜಣ್ಣ ಪರ ನಿಂತು ಮತಯಾಚನೆ ಮಾಡಲು ಶುರು ಮಾಡುತ್ತಿದ್ದಂತೆ ಹೊಸ ತಿರುವು ಪಡೆದುಕೊಂಡಿತು.

ಸಾಲಿಗ್ರಾಮ ಗ್ರಾಮ ಪಂಚಾಯಿತಿ 30 ಸದಸ್ಯರ ಬಲ ಹೊಂದಿದ್ದು, ಈ ಪೈಕಿ 20 ಮಂದಿ ಸದಸ್ಯರನ್ನು ಸಾ.ರಾ.ನಂದೀಶ್ ವಿಶ್ವಾಸಕ್ಕೆ ತೆಗೆದುಕೊಂಡು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಾಣಿರಾಜಣ್ಣ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. ಇದರಿಂದ ವಿಜಯ ಮಾಲೆ ರಾಣಿರಾಜಣ್ಣರ ಕೊರಳಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಶಾಸಕ ಸಾ.ರಾ.ಮಹೇಶ್ ತವರಿನ ಸಾಲಿಗ್ರಾಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆಯಾಗುತ್ತದೆ ಎಂದು ತಾಲ್ಲೂಕಿನ ರಾಜಕೀಯದಲ್ಲಿ ಲೆಕ್ಕಾಚಾರ ಮಾಡಲಾಗಿತ್ತು. ಆದರೆ, ಚಿಕ್ಕಮ್ಮ ಮತ್ತು ಮಗಳ ನಡುವೆ ಜಿದ್ದಾಜಿದ್ದಿನ ರಾಜಕೀಯ ಸೆಣಸಾಟ ಶುರುವಾಗಿದ್ದು ಸಾಲಿಗ್ರಾಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ ರಾಜಕೀಯ ಕೇಂದ್ರವಾಗಿ ಮಾರ್ಪಟ್ಟಿತ್ತು.

ಶುಕ್ರವಾರ ಬೆಳಿಗ್ಗೆ ಸಾ.ರಾ.ನಂದೀಶ್ ನೇತೃತ್ವದಲ್ಲಿ 19 ಮಂದಿ ಸದಸ್ಯರು ಚುನಾವಣಾ ಸಮಯಕ್ಕೆ ಒಟ್ಟಿಗೆ ಆಗಮಿಸಿ ಮತ ಚಲಾಯಿಸಿದರು. ಇದಿರಂದ ರಾಣಿ ರಾಜಣ್ಣ19   ಮತ ಪಡೆದು, ತಮ್ಮ ಪ್ರತಿಸ್ಪರ್ಧಿ ಸುನೋಜಮ್ಮ ಅವರನ್ನು ಪರಾಭವಗೊಳಿಸಿದರು. ಉಪಾಧ್ಯಕ್ಷ ನಟರಾಜ್ 18 ಮತ ಪಡೆದು, ತಮ್ಮ ಪ್ರತಿಸ್ಪರ್ಧಿ ಅಶೋಕ್ ಅವರನ್ನು ಪರಾಭವಗೊಳಿಸಿದರು.

ವಿಜಯಾೀತ್ಸವ: ರಾಣಿರಾಜಣ್ಣ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಸಾ.ರಾ.ನಂದೀಶ್ ಮತ್ತು ಜೆಡಿಎಸ್ ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯಾೀತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.