ADVERTISEMENT

ಚಿರತೆ ದಾಳಿ; ಮಹಿಳೆಗೆ ಗಾಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 8:41 IST
Last Updated 9 ಅಕ್ಟೋಬರ್ 2017, 8:41 IST

ಹಂಪಾಪುರ/ಸರಗೂರು: ಸಮೀಪದ ದೊಡ್ಡಬರಗಿ ಗ್ರಾಮದಲ್ಲಿ ಭಾನುವಾರ ಚಿರತೆ ದಾಳಿಗೆ ಮಹದೇವಮ್ಮ ಎಂಬುವವರು ಗಾಯಗೊಂಡಿದ್ದಾರೆ. ಹೊಲದಲ್ಲಿ ಹತ್ತಿ ಬಿಡಿಸಲು ಗೌರಮ್ಮ ಮತ್ತು ನಂಜಮ್ಮ ಅವರ ಜತೆ ಹೋಗುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿದೆ. ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಕೂಗಿಕೊಂಡಿದ್ದರಿಂದ ಅದು ಓಡಿಹೋಗಿದೆ.

ಮಹದೇವಮ್ಮ ಅವರು ಸರಗೂರಿನ ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಸರಗೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉಪ ಅರಣ್ಯ ವಲಯಾಧಿಕಾರಿ ನಿಂಗಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮಹದೇವಮ್ಮ ಅವರ ಆರೋಗ್ಯ ವಿಚಾರಿಸಿದರು.

ಗೌರಮ್ಮ ಮತ್ತು ನಂಜಮ್ಮ ಓಡಿ ಹೋಗುವಾಗ ಬಿದ್ದು ಗಾಯಗೊಂಡಿದ್ದು, ಅವರಿಗೆ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಗೆ ಮಾಜಿ ಶಾಸಕ ಚಿಕ್ಕಣ್ಣ ಭೇಟಿ ನೀಡಿ ಮಹದೇವಮ್ಮ ಅವರ ಆರೋಗ್ಯ ವಿಚಾರಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತಮಾಡಿ ಗಾಯಾಳುಗಳಿಗೆ ಚಿಕಿತ್ಸೆ ಜತೆಗೆ ಪರಿಹಾರ ನೀಡುವಂತೆ ತಾಕೀತು ಮಾಡಿದರು.

ADVERTISEMENT

ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಬೋನು ಇಡಬೇಕೆಂದು ದೊಡ್ಡಬರಗಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್, ಕುಮಾರ್, ಕರಿಗೌಡ ಒತ್ತಾಯಿಸಿದ್ದಾರೆ. ಎರಡು ವರ್ಷದ ಹಿಂದೆ ಸಮೀಪದ ಚಿಕ್ಕಬರಗಿ ಗ್ರಾಮದಲ್ಲಿ ಹುಲಿ ದಾಳಿಗೆ ಐವರು ಮೃತಪಟ್ಟಿದ್ದರು.

ಬೆಳಗನಹಳ್ಳಿಯಲ್ಲಿ ಬೋನು: ಬೆಳಗನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಚಿರತೆ ಕಾಣಿಸಿಕೊಂಡಿದ್ದರಿಂದ ಪ್ರಾದೇಶಿಕ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಬೋನು ಇಟ್ಟರು.
ಯೋಗೇಶ್ ಎಂಬುವವರ ಕಬ್ಬಿನ ಗದ್ದೆಯಲ್ಲಿ ಬೋನು ಇಡಲಾಗಿದ್ದು, ಅದರಲ್ಲಿ ನಾಯಿ ಕಟ್ಟಲಾಗಿದೆ. ಗ್ರಾಮಸ್ಥರ ದೂರಿನ ಮೇರೆಗೆ ಪ್ರಾದೇಶಿಕ ಅರಣ್ಯದ ಸಿಬ್ಬಂದಿಯಾದ ಪಾರ್ವತಿ ಮತ್ತು ಸತೀಶ್ ಶನಿವಾರ ಸ್ಥಳ ಪರಿಶೀಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.