ADVERTISEMENT

ತೂತ್ತುಕುಡಿ ಗೋಲಿಬಾರ್‌ ಘಟನೆಗೆ ಖಂಡನೆ

ಎಡಪಕ್ಷಗಳ ಜಂಟಿ ಸಮಿತಿಯಿಂದ ಮೈಸೂರು ನಗರದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 3:47 IST
Last Updated 25 ಮೇ 2018, 3:47 IST

ಮೈಸೂರು: ತಮಿಳುನಾಡಿನ ತೂತ್ತುಕುಡಿಯಲ್ಲಿ ನಡೆದ ಗೋಲಿಬಾರ್‌ ಘಟನೆಯನ್ನು ಖಂಡಿಸಿ ಎಡಪಕ್ಷಗಳ ಜಂಟಿ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸಿಪಿಐ, ಸಿಪಿಎಂ, ಸಿಪಿಎಂಎಲ್‌ ಲಿಬರೇಷನ್‌ ಮತ್ತು ಎಸ್‌ಯುಸಿಐ (ಕಮ್ಯುನಿಸ್ಟ್‌) ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ರಾಮಸ್ವಾಮಿ ವೃತ್ತದ ಬಳಿ ಪ್ರತಿಭಟನೆ ನಡೆಸಿ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತೂತ್ತುಕುಡಿಯಲ್ಲಿರುವ ತಾಮ್ರ ಸಂಸ್ಕರಣ ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ್ದ ಗೋಲಿಬಾರ್‌ನಲ್ಲಿ 10 ಮಂದಿ ಮೃತಪಟ್ಟಿದ್ದರು.

ADVERTISEMENT

ತೂತ್ತುಕುಡಿ ಘಟನೆಯು ಜಲಿಯನ್‌ವಾಲಾಬಾಗ್‌ ಘಟನೆಯನ್ನು ನೆನಪಿಸುತ್ತದೆ. ತಮಿಳುನಾಡು ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸುತ್ತೇವೆ ಎಂದು ಪ್ರತಿಭಟನಕಾರರು ಹೇಳಿದರು.

ಸ್ಟೆರ್‌ಲೈಟ್‌ ತಾಮ್ರ ಸಂಸ್ಕರಣ ಘಟಕ ಕಳೆದ 25 ವರ್ಷಗಳಿಂದ ಹೊರಸೂಸುತ್ತಿರುವ ಮಾಲಿನ್ಯದಿಂದ ಸುತ್ತಲಿನ ನೆಲ, ಜಲ, ಗಾಳಿ ಕಲುಷಿತಗೊಂಡಿದೆ. ಕಂಪನಿ ತನ್ನ ಘಟಕ ವಿಸ್ತರಿಸಲು ತೀರ್ಮಾನಿಸಿತ್ತು. ಇದರ ವಿರುದ್ಧ ನಡೆದ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದೆ ಎಂದು ಆರೋಪಿಸಿದರು.

ಗೋಲಿಬಾರ್‌ನಲ್ಲಿ ಬಲಿಯಾದವರ ಕುಟುಂಬ ಸದಸ್ಯರಿಗೆ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು. ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಕೆ.ಬಸವರಾಜು, ಎಚ್‌.ಆರ್‌.ಶೇಷಾದ್ರಿ, ಬಿ.ರವಿ, ಚೌಡಳ್ಳಿ ಜವರಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.