ADVERTISEMENT

ದಾಖಲೆಯ ಕ್ರೀಡಾಕೂಟದ ಸಮಾರೋಪ ನೀರಸ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 6:10 IST
Last Updated 4 ಅಕ್ಟೋಬರ್ 2011, 6:10 IST

ಮೈಸೂರು: ದಸರಾ ಕ್ರೀಡಾಕೂಟ ಉದ್ಘಾಟನೆಯಾದ ಸೆಪ್ಟೆಂಬರ್ 30ರಂದು ಅಥ್ಲೀಟ್‌ಗಳಿಂದ ತುಂಬಿದ್ದ ಚಾಮುಂಡಿ ವಿಹಾರ ಕ್ರೀಡಾಂಗಣ ಸೋಮವಾರ ಮುಕ್ತಾಯ ಸಮಾರಂಭದಂದು ಬಹುತೇಕ ಖಾಲಿಯಾಗಿತ್ತು!

ಸಮಾರೋಪ ಸಮಾರಂಭದಲ್ಲಿ ಎಲ್ಲ ವಿಭಾಗಗಳ ಆಟಗಾರರನ್ನು ಸೇರಿಸಿದರೆ 300-400 ಜನರೂ ಇರಲಿಲ್ಲ.  ಉದ್ಘಾಟನೆ ಸಮಾರಂಭದಲ್ಲಿ ಎಲ್ಲ ವಿಭಾಗಗಳಿಂದ ಬಂದಿದ್ದ ಸುಮಾರು 2500 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಕೂಟಕ್ಕೆ ಕಳೆ ತಂದಿದ್ದರು.

ಕೆಲಸಗಳ ತೀವ್ರ ಒತ್ತಡದಲ್ಲಿದ್ದ ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕಿ ಲಲಿತಮ್ಮ ಕೂಡ ಹೆಚ್ಚು ಮಾತನಾಡಲಿಲ್ಲ. ಸಮಗ್ರ ಪ್ರಶಸ್ತಿ, ವೈಯಕ್ತಿಕ ಪ್ರಶಸ್ತಿ ಮತ್ತು ತಂಡ ವಿಭಾಗದ ಪ್ರಶಸ್ತಿಗಳನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.
 
ಕೆಲವು ಪ್ರಶಸ್ತಿಗಳನ್ನು ಕೊಡುವಾಗ ಅದರ ವಿಜೇತರೇ ಸ್ಥಳದಲ್ಲಿರಲಿಲ್ಲ. ಇದರಿಂದಾಗಿ ಮೂರು ದಿನಗಳವರೆಗೆ ಒಂಬತ್ತು ದಾಖಲೆಗಳು ಮೂಡಿ ಬಂದ ಕೂಟದ ಸಮಾರೋಪ ಸಮಾರಂಭ ಮಾತ್ರ ಸಪ್ಪೆಯಾಯಿತು.

ಭಾನುವಾರ ಸಂಜೆಯೇ ಈಜು, ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ದೇಹದಾರ್ಢ್ಯ ಸ್ಪರ್ಧೆಗಳು ಮುಗಿದಿದ್ದು, ಬಹುತೇಕ ಆಟಗಾರರು ತಮ್ಮ ಊರುಗಳಿಗೆ ತೆರಳಿದ್ದರು.

ಉಪಸಮಿತಿ ಅಧ್ಯಕ್ಷ ದಾಸಯ್ಯ, ಯುವಜನ ಸೇವೆ ಮತ್ತುಕ್ರೀಡಾ ಇಲಾಖೆ ಉಪನಿರ್ದೇಶಕ ಬಿ. ಸುರೇಶ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.