ADVERTISEMENT

ನೆನಪಿನ ದೋಣಿಯಲಿ...

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 5:38 IST
Last Updated 27 ಡಿಸೆಂಬರ್ 2017, 5:38 IST

ತಿ.ನರಸೀಪುರ: ಓ...ಎಷ್ಟು ದಿನ ಆಯ್ತು ನಿಮ್ಮನ್ನು ನೋಡಿ, ಚೆನ್ನಾಗಿ ಇದ್ದೀರಾ... ಏನ್ ಮಾಡ್ಕೊಂಡ್ ಇದ್ದೀರಾ...ಎಷ್ಟು ಮಕ್ಕಳು... ಏನ್ ಓದುತ್ತಿದ್ದಾರೆ...ಹೀಗೆ ಒಬ್ಬರಿಗೊಬ್ಬರು ಕ್ಷೇಮ–ಕುಶಲ ವಿಚಾರಿಸುತ್ತಾ ಸಂತಸ, ಸಡಗರದಿಂದ ಓಡಾಡುತ್ತಿದ್ದರು. ಇಡೀ ವಾತಾವರಣವೇ ಸಂಭ್ರಮದಲ್ಲಿ ಮುಳುಗಿತ್ತು.

ಹೌದು. ಇಂತಹದೊಂದು ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಪಟ್ಟಣದ ವಿದ್ಯೋದಯ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗ ಏರ್ಪಡಿಸಿದ್ದ ಗುರು– ಶಿಷ್ಯರ ಅಪೂರ್ಮ ಸಮ್ಮಿಲನ ಕಾರ್ಯಕ್ರಮ. 1996ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ಬಳಿಕ ಉನ್ನತ ಶಿಕ್ಷಣ ಪಡೆದು ವಿವಿಧ ಹುದ್ದೆಗಳಲ್ಲಿರುವ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಈಚೆಗೆ ನಡೆಯಿತು. 21 ವರ್ಷಗಳ ಬಳಿಕ ಗುರು– ಶಿಷ್ಯರು ಓಟ್ಟಿಗೆ ಸೇರಿ ಸಂತಸ ಹಂಚಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಶಿಕ್ಷಕ ಪಿ.ಬಿ.ವೆಂಕಟಣ್ಣ, ಹಳೆ ವಿದ್ಯಾರ್ಥಿಗಳು ತಮಗೆ ಪಾಠ ಕಲಿಸಿದ ಶಿಕ್ಷಕರಿಗೆ ಗೌರವಿಸುವ ಈ ಕಾರ್ಯಕ್ರಮ ಅಭಿನಂದನಾರ್ಹ ಎಂದರು.

ADVERTISEMENT

ಉಪಪ್ರಾಂಶುಪಾಲ ಟಿ.ಪಿ.ವಿಶ್ವನಾಥ್, ಹಳೆ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಶಾಲೆಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಆಶಯ ಹೊಂದಿರುವುದು ಪ್ರಶಂನೀಯ ಎಂದರು.

‘ನಾವು ಅಧ್ಯಯನ ಮಾಡಿದ ವೇಳೆ ನಮ್ಮ ಪ್ರಗತಿಗೆ ಉತ್ತಮ ಅಡಿಪಾಯ ಹಾಕಿದ ಶಿಕ್ಷಕರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಅಗತ್ಯ ನೆರವು ನೀಡಲಾಗುವುದು’ ಎಂದು ಹಳೆ ವಿದ್ಯಾರ್ಥಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಂ.ಎನ್.ಸುರೇಶ್ ಕುಮಾರ್, ಕೆ.ಎನ್.ಗೋಪಾಲಕೃಷ್ಣ, ಶಿಕ್ಷಕರಾದ ಬಿ.ಎಂ.ರಾಮು, ಎಸ್.ನಾಗೇಂದ್ರಪ್ರಭು, ಹಳೆ ವಿದ್ಯಾರ್ಥಿಗಳಾದ ಮುರುಳಿ, ಶೇಷಗಿರಿ, ಆನಂದಮೂರ್ತಿ, ಚೈತನ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.