ADVERTISEMENT

ಪಕ್ಷದಲ್ಲಿನ ಗೊಂದಲಕ್ಕೆ ಶೀಘ್ರ ತೆರೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 4:34 IST
Last Updated 18 ಡಿಸೆಂಬರ್ 2017, 4:34 IST

ಪಿರಿಯಾಪಟ್ಟಣ: ತಾಲ್ಲೂಕಿನ ಬಿಜೆಪಿ ಘಟಕದಲ್ಲಿರುವ ನಾಯಕತ್ವದ ಗೊಂದಲದ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜ. 24ರಂದು ತಾಲ್ಲೂಕಿನಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ತೆರೆ ಎಳೆಯಲಿದ್ದಾರೆ ಎಂದು ವಿರಾಜಪೇಟೆ ಶಾಸಕ ಕೆ.ಜೆ.ಬೋಪಯ್ಯ ತಿಳಿಸಿದರು. ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದ ಬಿಜೆಪಿ ಬೂತ್ ಸಶಕ್ತೀಕರಣ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ಹಿಂದೂ ಪರ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಎಂದು ಗಟ್ಟಿ ಧ್ವನಿಯಲ್ಲಿ ಮಾತನಾಡುವವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ’ ಎಂದು ಬೋಪಯ್ಯ ಆರೋಪಿಸಿದರು.

‘ನನ್ನನ್ನು ತಾಲ್ಲೂಕಿನ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದ್ದು, ವಾರಕ್ಕೊಮ್ಮೆ ಕ್ಷೇತ್ರಕ್ಕೆ ಭೇಟಿ ನೀಡಿ ಪಕ್ಷ ಸಂಘಟನೆಗೆ ಮುಂದಾಗುವುದಾಗಿ’ ತಿಳಿಸಿದರು. ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಪಕ್ಷ ಬಿಟ್ಟರೂ ಅವರೊಂದಿಗೆ ಯಾರೂ ಪಕ್ಷ ತೊರೆದಿಲ್ಲ, ಅವರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ADVERTISEMENT

ಮುಖಂಡ ಎಚ್.ಡಿ.ಗಣೇಶ್, ಎರಡು ಬಾರಿ ಪಕ್ಷದಿಂದ ಸ್ಪರ್ಧಿಸಿದ್ದ ನಾನು ಒಮ್ಮೆ ಪಕ್ಷದಿಂದ ಹೊರಹೋಗಿ ತಪ್ಪು ಮಾಡಿದ್ದೇನೆ ಎನಿಸಿದೆ. ಈಗ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಗ್ರಾಮಾಂತರ ಸಂಚಾಲಕ ಡಾ.ಪ್ರಕಾಶ್ ಬಾಬುರಾವ್, ಕೇಂದ್ರ ತಂಬಾಕು ಮಂಡಳಿ ಉಪಾಧ್ಯಕ್ಷ ಪಿ.ವಿ.ಬಸವರಾಜಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಜೆ.ರವಿ, ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ಜಯ ರಾಮೇಗೌಡ, ಆನಂದ್, ಮುಖಂಡರಾದ ಎಂ.ಎಂ.ರಾಜೇಗೌಡ, ಆರ್.ಟಿ.ಸತೀಶ್, ಜಿ.ಸಿ.ವಿಕ್ರಂರಾಜ್, ಕೆ.ಕೆ.ಶಶಿ, ಬೆಮ್ಮತ್ತಿ ಚಂದ್ರು, ಲೋಕಪಾ ಲಯ್ಯ, ಚಂದ್ರು, ಶಿವಸ್ವಾಮಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.