ಮೈಸೂರು: ಮನೆಯವರನ್ನು ಒಪ್ಪಿಸಿ ಏಳು ತಿಂಗಳ ಹಿಂದೆ ಪ್ರಿಯತಮನ ಕೈಹಿಡಿದಿದ್ದ ಅಕ್ಷತಾ (24) ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
‘ಪತಿ ವೀರೇಶ್ಗೆ ಬಲ್ಲಾಳ ವೃತ್ತದಲ್ಲಿ ಶುಕ್ರವಾರ ಸಂಜೆ ಅಪಘಾತವಾಗಿತ್ತು. ಸ್ಥಳೀ ಯರು ಇವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಪತಿಗೆ ಅಪಘಾತವಾಗಿದ್ದರಿಂದ ಪತ್ನಿ ಆಘಾತಗೊಂಡಿದ್ದರು.
ಕೆ.ಆರ್.ಸಂಚಾರ ಠಾಣೆಯಲ್ಲಿದ್ದ ದ್ವಿಚಕ್ರ ವಾಹನವನ್ನು ತರಲು ವೀರೇಶ್, ಶನಿವಾರ ಬೆಳಿಗ್ಗೆ 9ಕ್ಕೆ ಮನೆ ಬಿಟ್ಟಿದ್ದರು. ಒಂದು ಗಂಟೆಯ ಬಳಿಕ ಮರಳಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ’ ಎಂದು ಸರಸ್ವತಿಪುರಂ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
‘ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೀನಮ್ಮ ಎಂಬುವರ ಪುತ್ರಿ ಅಕ್ಷತಾ, ಸರಸ್ವತಿಪುರಂ 14ನೇ ಮುಖ್ಯರಸ್ತೆಯ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದರು. ರಾಯಚೂರಿನ ವೀರೇಶ್ ಸರಸ್ವತಿಪುರಂನ ಹೋಟೆಲೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದಕ್ಕೆ ಹುಡುಗಿಯ ತಾಯಿ ಒಪ್ಪಿ, ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದರು. ಬಳಿಕ ಇವರು ಗಂಗೋತ್ರಿ ಬಡಾವಣೆಯಲ್ಲಿ ವಾಸವಾಗಿದ್ದರು’ ಎಂದು ವಿವರಿಸಿದ್ದಾರೆ.
‘ದಂಪತಿ ಅನ್ಯೋನ್ಯವಾಗಿದ್ದರು. ಪತಿಗೆ ಅಪಘಾತವಾಗಿದ್ದರಿಂದ ಅಕ್ಷತಾ ಕಂಗಾಲಾಗಿದ್ದಳು. ಇದ ರಿಂದ ಮನನೊಂದು ಆತ್ಮಹತ್ಯೆ ಮಾಡಿ ಕೊಂಡಿರುವ ಸಾಧ್ಯತೆ ಇದೆ’ ಎಂದು ಮೀನಮ್ಮ ಪೊಲೀಸರಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.