ನಂಜನಗೂಡು: ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅಂಗವಾಗಿ ಶುಕ್ರವಾರ ಪಟ್ಟಣ ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಹಸಿರು- ತೋರಣಗಳಿಂದ ಸಿಂಗರಿಸಲಾಗಿತ್ತು. ಆವರಣ ಶುಚಿಗೊಳಿಸಿ, ರಂಗೋಲಿ ಚಿತ್ತಾರ ಬಿಡಿಸಿ, ವಿವಿಧ ಹೂವುಗಳನ್ನು ಹರಡುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಲಾಗಿಯಿತು.
ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಏರ್ಪಡಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ವಿವಿಧ ಬ್ಯಾನರ್ ಪ್ರದರ್ಶಿಸಲಾಯಿತು. ಈವರೆಗೆ 122 ಮಕ್ಕಳು ನೋಂದಣಿಯಾಗಿರುವ ಈ ಶಾಲೆಗೆ ಮೊದಲ ದಿನವೇ 75 ಮಕ್ಕಳು ಹಾಜರಾಗಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪುರುಷೋತ್ತಮ ಅವರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು. ವಿದ್ಯಾರ್ಥಿಗಳಿಗೆ ಮೊದಲ ದಿನದ ಬಿಸಿಯೂಟವಾಗಿ ಬಿಸಿಬೇಳೆ ಬಾತ್, ಪಾಯಸ ಬಡಿಸಲಾಯಿತು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಹೇಶ್, ಮುಖ್ಯ ಶಿಕ್ಷಕ ಸದಾಶಿವಪ್ಪ, ಸಹಶಿಕ್ಷಕರಾದ ಸತೀಶ್, ಭಾಗ್ಯಲಕ್ಷ್ಮಿ, ಜಯಂತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ, ಅಡುಗೆ ಸಿಬ್ಬಂದಿ ಸರಸ್ವತಿ, ಗಾಯತ್ರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.